ADVERTISEMENT

ಯೋಜನಾ ವರದಿ ಸಿದ್ಧಪಡಿಸಿದ ಜಲಮಂಡಳಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:53 IST
Last Updated 16 ಮಾರ್ಚ್ 2014, 19:53 IST

ಬೆಂಗಳೂರು: ಕೆಂಗೇರಿ ಬಳಿಯ ದೊಡ್ಡಬೆಲೆಯಲ್ಲಿ ಪ್ರತಿದಿನ 140 ದಶಲಕ್ಷ ಲೀಟರ್‌ (ಎಂಎಲ್‌ಡಿ) ಕೊಳಚೆ ನೀರನ್ನು ಸಂಸ್ಕರಿಸುವ ಘಟಕ ಸ್ಥಾಪಿಸಲು ಬೆಂಗಳೂರು ಜಲಮಂಡಳಿ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಿದೆ.

ಎರಡು ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ಮುಂದಾ­ಗಿರುವ ಜಲಮಂಡಳಿ ವೃಷಭಾವತಿ ಕಣಿವೆ­ಯಲ್ಲಿ ಕೊಳಚೆ ನೀರು ಸಂಸ್ಕರಣೆ ಮತ್ತು ಮರುಬಳಕೆಯ ಯೋಜನೆ ಜಾರಿಗೊಳಿಸಲು ಉದ್ದೇಶಿಸಿದೆ.

ಮೊದಲ ಹಂತದಲ್ಲಿ ತಾಂತ್ರಿಕ ಅಂಶಗಳು, ಕಾರ್ಯಕ್ಷೇತ್ರ, ಸಂಸ್ಕರಣಾ ಘಟಕ ಸ್ಥಾಪನೆಯ ಸ್ಥಳದ ಬಗ್ಗೆ ಮತ್ತು ಎರಡನೇ ಹಂತದಲ್ಲಿ ನೀರಿನ ಮರು­ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಯೋಜನೆ­­ಯನ್ನು ಸಮರ್ಪಕವಾಗಿ ಅನು­ಷ್ಠಾನಕ್ಕೆ ತರುವ ವಿಚಾರಗಳಿಗೆ ವರದಿಯಲ್ಲಿ ಆದ್ಯತೆ ನೀಡಲಾಗಿದೆ.

140 ಎಂಎಲ್‌ಡಿ ನೀರನ್ನು ಸಂಸ್ಕರಿಸಲು ಯೋಜನಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಸಂಸ್ಕರಿಸಿದ ನೀರನ್ನು ತಾವರೆಕೆರೆ ಪಂಪಿಂಗ್‌ ಸ್ಟೇಷನ್‌ಗೆ ಪಂಪ್‌ ಮಾಡ­ಲಾಗು­ವುದು. ನಂತರ 70 ಎಂಎಲ್‌ಡಿ ನೀರನ್ನು ಅರ್ಕಾವತಿ ನದಿಗೆ ಹರಿಸಲಾ­ಗು­ವುದು. ಆ ನೀರನ್ನು ಮಳೆ ನೀರಿನ ಜತೆಗೆ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿಸ­­ಲಾಗುವುದು. ಇನ್ನುಳಿದ 70 ಎಂಎಲ್‌ಡಿ ನೀರನ್ನು ಪೀಣ್ಯ ಕೈಗಾರಿಕಾ ಪ್ರದೇ­ಶಕ್ಕೆ ಪೂರೈಸಲು ಉದ್ದೇಶಿಸ­ಲಾಗಿದೆ.

ತಿಪ್ಪಗೊಂಡನಹಳ್ಳಿ ಜಲಾಶಯ­ದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದ್ದು, ಜಲಾ­ಶಯಕ್ಕೆ ನೀರು ಹರಿಸಿ ಸುತ್ತ­ಮುತ್ತಲಿನ ಪ್ರದೇಶದ ಅಂತರ್ಜಲ ಮಟ್ಟ ಹೆಚ್ಚಿಸುವುದು ಯೋಜನೆಯ ಉದ್ದೇಶ­ವಾಗಿದೆ. 145 ಎಂಎಲ್‌ಡಿ ನೀರು ಸಂಗ್ರಹ ಸಾಮರ್ಥ್ಯದ ತಿಪ್ಪ­ಗೊಂಡ­ನಹಳ್ಳಿ ಜಲಾಶಯದಿಂದ ಮುಂದಿನ ದಿನಗಳಲ್ಲಿ ನಗರಕ್ಕೆ ನೀರು ಪೂರೈಕೆ ಮಾಡುವುದು ಯೋಜನೆ­ಯಲ್ಲಿ ಸೇರಿದೆ.

ಸಿಂಗಪುರದ ಪಬ್ಲಿಕ್‌ ಯುಟಿಲಿಟಿ ಬೋರ್ಡ್‌ (ಪಿಯುಬಿ) ಸಹಭಾಗಿತ್ವ­ದಲ್ಲಿ ಯೋಜನೆ ಜಾರಿಗೆ ಬರಲಿದೆ. ಪಿಯುಬಿ, ಟೆಮಾಸೆಕ್‌ ಫೌಂಡೇಷನ್‌ ಮತ್ತು ಸಿಎಚ್‌2ಎಂ ಹಿಲ್‌ ಕನ್ಸಲ್ಟಿಂಗ್ ಸಂಸ್ಥೆ­ಗಳು ಸಂಸ್ಕರಣಾ ಘಟಕ ಸ್ಥಾಪನೆ ಕುರಿತ ವಾಸ್ತವಾಂಶದ ವರದಿ ಸಿದ್ಧಪಡಿಸಿವೆ.ಲೋಕಸಭಾ ಚುನಾವಣೆಯ ನಂತರ ಯೋಜನೆಯ ಅಂತಿಮ ರೂಪುರೇಷೆ ಸಿದ್ಧ­­ವಾಗಲಿದೆ ಎನ್ನುತ್ತಾರೆ ಜಲ­ಮಂಡ­ಳಿಯ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT