ಬೆಂಗಳೂರು: ಮಹದೇವಪುರ ಕ್ಷೇತ್ರದ ಬೈರತಿ ಸಮೀಪದ ರಾಂಪುರ ಕೆರೆಕೋಡಿಯಲ್ಲಿ ಕಾಣಿಸಿಕೊಂಡಿರುವ ನೊರೆಯ ಪ್ರಮಾಣ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ನೊರೆಯ ಪ್ರಮಾಣ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಕೆರೆ ಕೋಡಿಯಲ್ಲಿ ಮಂಗಳವಾರ ದುರ್ನಾತದಿಂದ ಕೂಡಿದ ನೊರೆ ಭಾರಿ ಪ್ರಮಾಣದಲ್ಲಿ ತುಂಬಿಕೊಂಡಿತ್ತು. ಇದರಿಂದಾಗಿ ಆಸುಪಾಸಿನ ರೈತರು ಕಿರಿಕಿರಿ ಅನುಭವಿಸುವಂತಾಗಿದೆ. ಆಗಾಗ ಜೋರಾಗಿ ಗಾಳಿ ಬಂದಾಗ ಪಕ್ಕದ ರಸ್ತೆಗೂ ನೊರೆ ಚಿಮ್ಮುತ್ತಿತ್ತು. ಈ ರಸ್ತೆಯಲ್ಲಿ ಸಾಗುವವರು, ಮೈಮೇಲೆ ನೊರೆ ಬೀಳುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಸದ ಹಾವಳಿ: ‘ಕೆರೆಯಲ್ಲಿ ನೊರೆ ಹಾವಳಿಯ ಜೊತೆಗೆ ಕಸದ ಸಮಸ್ಯೆಯೂ ಹೆಚ್ಚಿದೆ. ದೊಡ್ಡಗುಬ್ಬಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಊರುಗಳಲ್ಲಿ ಸಂಗ್ರಹವಾಗುವ ಕಸವನ್ನು ಕೆರೆ ಕೋಡಿಯಲ್ಲಿ ಸುರಿಯಲಾಗುತ್ತಿದೆ. ಈ ಕಸ ಕೆರೆ ನೀರಿನೊಂದಿಗೆ ಸೇರಿ, ಕೊಳೆತು ದುರ್ನಾತ ಮತ್ತಷ್ಟು ಹೆಚ್ಚುತ್ತಿದೆ. ಗಾಳಿ ಬೀಸಿದಾಗ ಅದರ ಜೊತೆ ವಾಕರಿಕೆ ತರಿಸುವಂತಹ ದುರ್ವಾಸನೆಯೂ ಊರಿನೊಳಕ್ಕೆ ಬರುತ್ತಿದೆ. ಆದ್ದರಿಂದ ಕೆರೆ ಕೋಡಿಯಲ್ಲಿ ಕಸವನ್ನು ಸುರಿಯದಂತೆ ಗ್ರಾಮ ಪಂಚಾಯ್ತಿ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ನಿವಾಸಿ ಮಂಜುಳಮ್ಮ ಆಗ್ರಹಿಸಿದರು.
‘ನೊರೆ ಕಾಣಿಸಿಕೊಳ್ಳುವ ಮೊದಲು ಸೊಳ್ಳೆಗಳ ಹಾವಳಿ ಕಡಿಮೆಯಾಗಿತ್ತು. ಆದರೆ ಇತ್ತೀಚೆಗೆ ಸೊಳ್ಳೆಗಳ ಹಾವಳಿ ಬಹಳ ಹೆಚ್ಚಾಗಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಕಚೇರಿಗೆ ದೂರು ನೀಡಿದ್ದೇವೆ. ಸೊಳ್ಳೆಗಳ ಹಾವಳಿಯನ್ನು ತಡೆಗಟ್ಟಲು ಔಷಧಿ ಸಿಂಪಡಿಸುವಂತೆ ಕೋರಿದ್ದೆವು. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.
ಬಿಬಿಎಂಪಿಯಿಂದಲೂ ಕಸ: ‘ಕೆರೆ ಕಟ್ಟೆಯ ಮೇಲಿನ ರಸ್ತೆ ಬದಿಯಲ್ಲಿ ಬಿಬಿಎಂಪಿ ಪೌರ ಕಾರ್ಮಿಕರು ರಾತ್ರಿವೇಳೆಯಲ್ಲಿ ಲಾರಿಗಟ್ಟಲೇ ಕಸವನ್ನು ಸುರಿದು ಹೋಗುತ್ತಿದ್ದಾರೆ.
ಈ ಕಸವೂ ಕೆರೆಯನ್ನು ಸೇರುತ್ತಿದೆ. ರಸ್ತೆಯಲ್ಲಿ ಸಂಚರಿಸುವವರು ಕೊಳೆತು ನಾರುವ ಕಸದ ರಾಶಿಯಿಂದಾಗಿ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಶಾಸಕರ ವಿರುದ್ಧವೂ ಆಕ್ರೋಶ
‘ಬೆಳ್ಳಂದೂರು ಕೆರೆಯಂತೆಯೇ ರಾಂಪುರ ಕೆರೆಯಲ್ಲಿ ನೊರೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಾಗಲಿ, ಕೆರೆ ಅಭಿವೃದ್ಧಿ ಪ್ರಾಧಿಕಾರವಾಗಲಿ ಇತ್ತ ಗಮನಹರಿಸಿಲ್ಲ. ಸ್ಥಳೀಯ ಶಾಸಕರಂತೂ ಸಮಸ್ಯೆಯನ್ನು ಕಿವಿಗೆ ಹಾಕಿಕೊಂಡಿಲ್ಲ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಹೇಳುತ್ತಾರೆ’ ಎಂದು ಸ್ಥಳೀಯ ನಿವಾಸಿ ಯಲ್ಲಪ್ಪ ಆರೋಪಿಸಿದರು.
‘ಕೆರೆಗೆ ಕಶ್ಮಲ ಸೇರುತ್ತಿರುವುದನ್ನು ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.