ಬೆಂಗಳೂರು: ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತು ತಾವು ಜೊತೆಗೂಡಿ 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 260 ಕೋಟಿ ರೂಪಾಯಿ ನೀಡಿರುವುದಾಗಿ ಶಾಸಕ ಬಿ.ಶ್ರೀರಾಮುಲು ನೀಡಿರುವ ಹೇಳಿಕೆ ಕುರಿತು ತನಿಖೆ ನಡೆಸುವಂತೆ ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಬುಧವಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.
`ವಿಧಾನಸಭಾ ಚುನಾವಣೆಯ ಮುನ್ನ ಆರು ತಿಂಗಳ ಕಾಲ ತಲಾ 10 ಕೋಟಿ ರೂಪಾಯಿಯನ್ನು ಪಕ್ಷ ಸಂಘಟನೆಗಾಗಿ ನೀಡಿದ್ದೆವು. ಚುನಾವಣೆ ನಂತರ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಿ.ಎಸ್.ಯಡಿಯೂರಪ್ಪ ಅವರಿಗೆ 200 ಕೋಟಿ ರೂಪಾಯಿ ನೀಡಿದ್ದೆವು~ ಎಂದು ಶ್ರೀರಾಮುಲು ಅವರು ಇತ್ತೀಚೆಗೆ ಗದಗದ ತೋಂಟದಾರ್ಯ ಸ್ವಾಮೀಜಿಯವರ ಜೊತೆ ಚರ್ಚಿಸುತ್ತಾ ನೀಡಿದ್ದ ಹೇಳಿಕೆಯ ದೃಶ್ಯಾವಳಿಗಳು ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿತ್ತು.
ಈ ಸಂಬಂಧ ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಟಿ.ಆರ್.ಶ್ರೀನಿವಾಸ್ ಅವರು ಲೋಕಾಯುಕ್ತದ ರಿಜಿಸ್ಟ್ರಾರ್ ಬಿ.ಯೋಗಿನಾಥ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. `ಬಿಜೆಪಿಯು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಅಕ್ರಮ ಎಸಗಿರುವುದಕ್ಕೆ ಶ್ರೀರಾಮುಲು ಅವರ ಹೇಳಿಕೆಯಿಂದ ಸಾಕ್ಷ್ಯ ದೊರೆತಿದೆ.
ಈ ಬಗ್ಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸಬೇಕು~ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯೊಬ್ಬರು ಹತ್ತು ಲಕ್ಷ ರೂಪಾಯಿ ಮಾತ್ರ ವೆಚ್ಚ ಮಾಡಲು ಕಾನೂನಿನಲ್ಲಿ ಅವಕಾಶವಿದೆ.
ಆದರೆ, ಬಿಜೆಪಿಯು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಂದಲೇ 260 ಕೋಟಿ ರೂಪಾಯಿ ಪಡೆದು, ವೆಚ್ಚ ಮಾಡಿದ್ದಲ್ಲಿ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ. ಶ್ರೀರಾಮುಲು ಅವರು ನೀಡಿರುವ ಹೇಳಿಕೆ ಮತ್ತು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರದ ನಡುವೆಯೂ ವ್ಯತ್ಯಾಸ ಇದೆ. ಈ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾದ ಎಸ್.ಮನೋಹರ್, ಡಿ.ಎ.ಪ್ರಮೋದ್ ಶಂಕರ್, ಜಿ.ಮೋಹನ್ಕುಮಾರ್, ಎ.ಅಮರನಾಥ್, ನಟರಾಜ್ ಗೌಡ ಮತ್ತಿತರರು ದೂರು ಸಲ್ಲಿಸಿದ ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.