ADVERTISEMENT

ಲಂಚ ಪಡೆದ ಆರೋಪ ಸಾಬೀತು: ಆರೋಗ್ಯ ಇಲಾಖೆ ಅಧಿಕಾರಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:50 IST
Last Updated 7 ಜನವರಿ 2012, 19:50 IST

ಬೆಂಗಳೂರು: ಖಾಸಗಿ ನರ್ಸಿಂಗ್ ಕಾಲೇಜು ಮಂಜೂರಾತಿ ಆದೇಶ ವಿತರಣೆಗೆ ಹತ್ತು ಸಾವಿರ ರೂಪಾಯಿ ಲಂಚ ಪಡೆದಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ `ಸೆಕ್ಷನ್~ ಅಧಿಕಾರಿ ಎಚ್.ಜಯರಾಂ ಅವರಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಒಂದು ವರ್ಷ ಒಂಬತ್ತು ತಿಂಗಳ ಕಠಿಣ ಜೈಲು ಶಿಕ್ಷೆ , 12,500 ರೂ ದಂಡ ವಿಧಿಸಿದೆ.

2005ರಲ್ಲಿ ನಡೆದ ಲಂಚ ಪ್ರಕರಣ ಕುರಿತು ವಿಚಾರಣೆ ಪೂರ್ಣಗೊಳಿಸಿದ ವಿಶೇಷ ನ್ಯಾಯಾಲಯದ ನ್ಯಾಯಾ ಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಶನಿವಾರ ಸಂಜೆ ಆದೇಶ ಪ್ರಕಟಿಸಿದರು. ಜಯರಾಂ ವಿರುದ್ಧದ ಆರೋಪಗಳು ವಿಚಾರಣೆಯ ವೇಳೆ ಸಾಬೀತಾಗಿವೆ ಎಂದು ಆದೇಶದಲ್ಲಿ ತಿಳಿಸಿದರು.

ಲಂಚಕ್ಕೆ ಒತ್ತಾಯಿಸಿರುವುದಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 7ರ ಅಡಿಯಲ್ಲಿ ಒಂಬತ್ತು ತಿಂಗಳ ಕಠಿಣ ಸಜೆ ಮತ್ತು ರೂ 5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದರೆ ಮೂರು ತಿಂಗಳ ಜೈಲುವಾಸ ಅನುಭವಿಸಬೇಕು. ಲಂಚ ಪಡೆದಿರುವುದಕ್ಕಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13(1)ಡಿ ಮತ್ತು 13(2)ರ ಪ್ರಕಾರ ಒಂದು ವರ್ಷ ಕಠಿಣ ಸಜೆ ಮತ್ತು ರೂ 7,500 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಏಳು ತಿಂಗಳ ಸೆರೆವಾಸ ಅನುಭವಿಸಬೇಕು.

ಪ್ರಕರಣದ ವಿವರ: ಎಂಜಿಬಿ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಯ ವ್ಯವಸ್ಥಾಪಕ ಟ್ರಸ್ಟಿ ಯಾಗಿದ್ದ ಅಜಯ್ ಘೋಷ್ ಎಂಬು ವರು ಮೈಸೂರು ರಸ್ತೆಯಲ್ಲಿ ನರ್ಸಿಂಗ್ ಕಾಲೇಜು ಆರಂಭಕ್ಕೆ ಮಂಜೂರಾತಿ ಕೋರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಮಂಜೂರಾತಿ ಆದೇಶ ಪಡೆಯಲು ಹೋದಾಗ 20,000 ರೂಪಾಯಿ ಲಂಚ ನೀಡುವಂತೆ ಇಲಾಖೆಯ `ಸೆಕ್ಷನ್~ ಅಧಿಕಾರಿ ಜಯರಾಂ ಒತ್ತಾ ಯಿ ಸಿದ್ದರು. ನಂತರ ರೂ 10,000 ನೀಡಿದರೆ ಮಂಜೂರಾತಿ ಪತ್ರ ನೀಡುವುದಾಗಿ ಹೇಳಿದ್ದರು.

ಆರೋಪಿಯು ಲಂಚಕ್ಕೆ ಒತ್ತಾ ಯಿಸುತ್ತಿರುವ ಬಗ್ಗೆ ಅಜಯ್ ಘೋಷ್ ಬೆಂಗಳೂರು ನಗರ ಲೋಕಾ ಯುಕ್ತ ಪೊಲೀಸರಿಗೆ ದೂರು ಸಲ್ಲಿಸಿ ದ್ದರು. 2005ರ ಜೂನ್ 15ರಂದು ಅಜಯ್ ಘೋಷ್ ಅವರಿಂದ ಜಯರಾಂ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.