ADVERTISEMENT

ವಂದನಾ ನಿರ್ಣಯ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:45 IST
Last Updated 8 ಫೆಬ್ರುವರಿ 2012, 19:45 IST

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರತಿಪಕ್ಷಗಳ ವಿರೋಧದ ನಡುವೆಯೇ ವಿಧಾನಸಭೆ ಬುಧವಾರ ಅಂಗೀಕಾರ ನೀಡಿತು.
ನಗ್ನ ಚಿತ್ರಗಳ ವೀಕ್ಷಣೆ ವಿವಾದ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಗ್ರಾಸ ನೀಡಿತು. ಪ್ರತಿಪಕ್ಷಗಳು ಚರ್ಚೆಗೆ ಪಟ್ಟುಹಿಡಿದು ಧರಣಿ ನಡೆಸುತ್ತಿದ್ದಾಗಲೇ ಮುಖ್ಯಮಂತ್ರಿ ಸದಾನಂದ ಗೌಡ ಅವರು ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಲಿಖಿತ ಉತ್ತರವನ್ನು ಮಂಡಿಸಿದರು.

ವಂದನಾ ನಿರ್ಣಯದ ಮೇಲೆ ಚರ್ಚೆಯೇ ಆಗಿಲ್ಲ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಹೇಗೆ ಉತ್ತರ ನೀಡುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ನಿರ್ಣಯವನ್ನು ಮತಕ್ಕೆ ಹಾಕುವಂತೆ ಸಚಿವ ಎಸ್.ಸುರೇಶ್‌ಕುಮಾರ್ ಸ್ಪೀಕರ್ ಅವರನ್ನು ಕೋರಿದರು.

ಸದಸ್ಯರು ಧರಣಿ ನಡೆಸುತ್ತಿದ್ದಾಗಲೇ ಸ್ಪೀಕರ್ ನಿರ್ಣಯವನ್ನು ಮತಕ್ಕೆ ಹಾಕಿ, ಸದನದ ಒಪ್ಪಿಗೆಯನ್ನೂ ಪಡೆದರು. ರಾಜ್ಯಪಾಲರ ಭಾಷಣದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಇನ್ನೂ ಮಾತನಾಡಿರಲಿಲ್ಲ. ಬಿಜೆಪಿಯ ಜೀವರಾಜ್ ಮತ್ತು ನೆಹರು ಓಲೇಕರ್ ಮಾತ್ರ ಮಾತನಾಡಿದ್ದರು.
ನಿಗದಿಯಂತೆ ಶುಕ್ರವಾರದವರೆಗೆ ಸದನ ನಡೆಯಬೇಕಿತ್ತು. ಆದರೆ, ನಗ್ನ ಚಿತ್ರಗಳ ವೀಕ್ಷಣೆ ಪ್ರಕರಣ ಕೋಲಾಹಲ ಉಂಟುಮಾಡಿದ ಕಾರಣ ಅನಿರ್ದಿಷ್ಟ ಅವಧಿಗೆ  ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.