ADVERTISEMENT

ವರ್ತೂರು ಸೇತುವೆಗೆ ಹಾನಿ: ವಾಹನಗಳ ಸಂಚಾರ ಬಂದ್

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:28 IST
Last Updated 22 ಮೇ 2018, 19:28 IST
ಸೇತುವೆ ಸ್ಥಳದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ನಿವಾಸಿಗಳ ಜತೆ ಚರ್ಚಿಸಿದರು
ಸೇತುವೆ ಸ್ಥಳದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ನಿವಾಸಿಗಳ ಜತೆ ಚರ್ಚಿಸಿದರು   

ಬೆಂಗಳೂರು: ವರ್ತೂರು ಸೇತುವೆ ಹಾಳಾಗಿದ್ದು, ವಾಹನಗಳ ಸವಾರರಿಗೆ ಅಲುಗಾಡಿದ ಅನುಭವವಾಗುತ್ತಿದೆ. ಹೀಗಾಗಿ,ಸೇತುವೆಯಲ್ಲಿ ಭಾರೀ ಗಾತ್ರದ ವಾಹನಗಳ (ಎಚ್‌ಎಂವಿ) ಸಂಚಾರವನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ಹಲವು ದಿನಗಳಿಂದ ಸೇತುವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ. ಇತ್ತೀಚೆಗೆ ಸವಾರರು ಸಂಚರಿಸುತ್ತಿದ್ದ ವೇಳೆ ಸೇತುವೆ ಅಲುಗಾಡಿದ ಅನುಭವವಾಗಿತ್ತು. ಆ ಬಗ್ಗೆ ಅವರು, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅವರ ಪೋಸ್ಟ್‌ನ್ನು ಹಲವರು ಶೇರ್‌ ಮಾಡಿದ್ದರು. ಅದೇ ವಿಷಯವನ್ನು ಕೈಗೆತ್ತಿಕೊಂಡಿದ್ದ ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯು ಹೋರಾಟ ಶುರು ಮಾಡಿತ್ತು.

ಅದಕ್ಕೆ ಸ್ಪಂದಿಸಿದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಸೇತುವೆ ಇರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

‘ಇತ್ತೀಚೆಗೆ ಸುರಿದ ಮಳೆ ಹಾಗೂ ನಿರಂತರವಾಗಿ ವಾಹನಗಳ ಓಡಾಟದಿಂದ ಸೇತುವೆಗೆ ಹಾನಿ ಆಗಿದೆ’ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯ ಸದಸ್ಯರೊಬ್ಬರು ತಿಳಿಸಿದರು.

ಶಾಸಕ ಲಿಂಬಾವಳಿ, ‘ಸೇತುವೆ ಪರಿಶೀಲಿಸಿ ವರದಿ ನೀಡುವಂತೆ ಹಿರಿಯ ಎಂಜಿನಿಯರ್‌ಗೆ ಹೇಳಿದ್ದೇನೆ’ ಎಂದು ಹೇಳಿದರು.

ವೈಟ್‌ಫೀಲ್ಡ್‌ ಸಂಚಾರ ಪೊಲೀಸರು, ‘ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿದ್ದೇವೆ. ಅಗತ್ಯಬಿದ್ದರೆ, ಎಲ್ಲ ವಾಹನಗಳ ಸಂಚಾರವನ್ನು ನಿರ್ಬಂಧಿಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.