ಬೆಂಗಳೂರು: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ಮೂರು ತಿಂಗಳಿನಿಂದ ತಡೆಹಿಡಿದಿರುವ ಪೌರಕಾರ್ಮಿಕರ ವೇತನವನ್ನು ಕೂಡಲೇ ಪಾವತಿಸಬೇಕು~ ಎಂದು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘಟನೆ ಅಧ್ಯಕ್ಷ ಎಸ್. ಬಾಲನ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೇತನ ನೀಡದ ಕಾರಣ ನಗರದ ಕೆಲವು ಪ್ರದೇಶಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ~ ಎಂದ ಅವರು, `ಬಿಬಿಎಂಪಿಯಲ್ಲಿ ಸುಮಾರು 17 ಸಾವಿರ ಪೌರಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, ಅವರ ಜೀವನದ ಚೆಲ್ಲಾಟ ಆಡುವುದು ಸಲ್ಲ~ ಎಂದರು.
`ಗುತ್ತಿಗೆದಾರರನ್ನು ಕೇಳಿದರೆ ಬಿಬಿಎಂಪಿ ಹಣ ನೀಡಿಲ್ಲ ಎನ್ನುತ್ತಿದ್ದು, ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಿಸಿದರೆ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎನ್ನುತ್ತಿದ್ದಾರೆ. ಇಬ್ಬರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ~ ಎಂದು ಆರೋಪಿಸಿದರು.
`ಕಾರ್ಮಿಕ ಕಾಯಿದೆಯ ಪ್ರಕಾರ ಕನಿಷ್ಠ ವೇತನ ನೀಡಬೇಕು ಎಂಬುದು ಸಂವಿಧಾನ ಬದ್ಧ ಹಕ್ಕಾಗಿದ್ದು, ಆ ಹಕ್ಕನ್ನು ಪಡೆಯಲು ಆಯಾ ವಾರ್ಡ್ಗಳ ಬಿಬಿಎಂಪಿ ಕಚೇರಿ ಎದುರು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ~ ಎಂದರು.
`ಪ್ರತಿ ತಿಂಗಳು 7ರೊಳಗೆ ವೇತನ, ಎಲ್ಲಾ ಗುತ್ತಿಗೆ ಪೌರಕಾರ್ಮಿಕರಿಗೆ ಇ.ಎಸ್.ಐ, ಪಿ.ಎಫ್, ಗುರುತಿನ ಕಾರ್ಡ್ ಸೌಲಭ್ಯ ನೀಡಬೇಕು. ಕಾರ್ಮಿಕ ಕಾನೂನನ್ನು ಪಾಲಿಸದ ಗುತ್ತಿಗೆದಾರರ ಲೈಸನ್ಸ್ ರದ್ದು ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು~ ಎಂದು ತಿಳಿಸಿದರು. ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘಟನೆ ಸಂಘಟನಾ ಕಾರ್ಯದರ್ಶಿ ಗೌರಿ, ಪ್ರಜಾತಾಂತ್ರಿಕ ಜನರ ವೇದಿಕೆ ಸಂಚಾಲಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.