ADVERTISEMENT

ಶಿಕ್ಷಣದಲ್ಲಿ ಕಾಣದ ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:53 IST
Last Updated 14 ಅಕ್ಟೋಬರ್ 2017, 19:53 IST
ಶೇಷಾದ್ರಿಪುರ ಶಿಕ್ಷಣ ದತ್ತಿಯ ಪ್ರಧಾನಕಾರ್ಯದರ್ಶಿ ವೂಡೇ.ಪಿ.ಕೃಷ್ಣ, ಸ್ಯಾಮ್‌ ಪಿತ್ರೋಡ, ಟ್ರಾನ್ಸ್‌ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಕುಲಪತಿ ಬಾಲಕೃಷ್ಣ ಪಿಸುಪತಿ, ಶೇಷಾದ್ರಿಪುರ ಶಿಕ್ಷಣದತ್ತಿಯ ಟ್ರಸ್ಟಿ ಎಂ.ಗೋಪಾಲ್‌ ಇದ್ದರು
ಶೇಷಾದ್ರಿಪುರ ಶಿಕ್ಷಣ ದತ್ತಿಯ ಪ್ರಧಾನಕಾರ್ಯದರ್ಶಿ ವೂಡೇ.ಪಿ.ಕೃಷ್ಣ, ಸ್ಯಾಮ್‌ ಪಿತ್ರೋಡ, ಟ್ರಾನ್ಸ್‌ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಕುಲಪತಿ ಬಾಲಕೃಷ್ಣ ಪಿಸುಪತಿ, ಶೇಷಾದ್ರಿಪುರ ಶಿಕ್ಷಣದತ್ತಿಯ ಟ್ರಸ್ಟಿ ಎಂ.ಗೋಪಾಲ್‌ ಇದ್ದರು   

ಬೆಂಗಳೂರು: ‘ದೂರಸಂಪರ್ಕ ಕ್ಷೇತ್ರದಲ್ಲಿ ದೇಶವು ಗಣನೀಯ ಪ್ರಗತಿ ಸಾಧಿಸಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಜನೆಯಲ್ಲಿ ಹೆಚ್ಚಿನ ಸಾಧನೆಯಾಗದಿರುವುದು ವಿಪರ್ಯಾಸ’ ಎಂದು ದೂರಸಂಪರ್ಕ ಕ್ರಾಂತಿಯ ಪಿತಾಮಹ ಸ್ಯಾಮ್‌ ಪಿತ್ರೋಡ ವಿಷಾದಿಸಿದರು.

ಯಲಹಂಕದ ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ರಜತ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ
ದಲ್ಲಿ ‘ಆಶಾದಾಯಕ ಮನಸ್ಸುಗಳಿಗಾಗಿ ಆಧುನಿಕ ಶಿಕ್ಷಣದಲ್ಲಿ ಸೃಜನಶೀಲತೆ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

‘ಅನ್ಯಮಾರ್ಗಗಳ ಮೂಲಕ ಹೆಚ್ಚಿನ ಅಂಕಗಳನ್ನು ಪಡೆಯುವುದಕ್ಕಿಂತ ನ್ಯಾಯ ಮಾರ್ಗಗಳ ಮೂಲಕ ಪಡೆಯುವ ಜ್ಞಾನವು ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಪೋಷಕರು ಹಾಗೂ ಸಮಾಜದ ಒತ್ತಡದ ನಡುವೆ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸುವತ್ತ ಗಮನ ಹರಿಸುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ವಾಮಮಾರ್ಗಗಳನ್ನು ಅನುಸರಿಸಲು ಯೋಚಿಸುತ್ತಾರೆ. ಇದರಿಂದ ಗಳಿಸುವ ಅಂಕಗಳಿಗಿಂತ ಒಂದು ವರ್ಷ ಅದೇ ವಿಷಯವನ್ನು ಕಲಿತು ಜ್ಞಾನ ವೃದ್ಧಿಸಿಕೊಳ್ಳುವುದು ಉತ್ತಮ’ ಎಂದು ತಿಳಿಸಿದರು.

ADVERTISEMENT

‘ಸದ್ಯ ಉದ್ಯೋಗ ಕ್ಷೇತ್ರ ನಿರೀಕ್ಷಿಸುವುದು ಕೌಶಲಯುಕ್ತ ಜ್ಞಾನವನ್ನೇ ಹೊರತು ಅಂಕಗಳನ್ನಲ್ಲ. ಶಿಕ್ಷಣ ಕ್ಷೇತ್ರವು ಇಂದು ಕೇವಲ ಹಣ ಗಳಿಸುವ ಕ್ಷೇತ್ರವಾಗಿ ಮಾರ್ಪಡುತ್ತಿದೆ. ಒಳ್ಳೆಯ ಕೌಶಲ ಮತ್ತು ಜ್ಞಾನ ಮಾತ್ರ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ನೆರವಿಗೆ ಬರಲಿದೆ. ಈ ದಿಸೆಯಲ್ಲಿ ಅಂಕಗಳ ಜತೆಗೆ ಜ್ಞಾನ ಹಾಗೂ ಕೌಶಲವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘ದೇಶವು ಶೇ.50ಕ್ಕಿಂತಲೂ ಹೆಚ್ಚು ಯುವಜನರನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ವಿಶ್ವದ ಮುಂಚೂಣಿ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಬೇಕಾದರೆ ಯುವಶಕ್ತಿ ಸಮರ್ಪಕವಾಗಿ ಬಳಕೆಯಾಗಬೇಕು. ಜತೆಗೆ ಸೇವಾ ಮನೋಭಾವನೆ ಬೆಳೆಸುವುದು ಅತಿ ಮುಖ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.