ADVERTISEMENT

ಸಂದೀಪ್ ಉನ್ನಿಕೃಷ್ಣನ್ ಹುಟ್ಟುಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಯಲಹಂಕ: ಮುಂಬೈನಲ್ಲಿ ಉಗ್ರರ ದಾಳಿಗೆ ಬಲಿಯಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ 35ನೇ ಹುಟ್ಟುಹಬ್ಬವನ್ನು ಇಲ್ಲಿನ ಹಾರೋಹಳ್ಳಿ ಬಳಿಯಿರುವ ಅವರ ಮನೆಯಲ್ಲಿ ಗುರುವಾರ ಆಚರಿಸಲಾಯಿತು.
ಸಂದೀಪ್ ಅವರ ತಂದೆ ಉನ್ನಿಕೃಷ್ಣನ್ ಮತ್ತು ತಾಯಿ ಧನಲಕ್ಷ್ಮಿ ಅವರು ಕೇಕ್ ಕತ್ತರಿಸುತ್ತಿದ್ದಂತೆ ಅಭಿಮಾನಿಗಳು ಘೋಷಣೆಗಳನ್ನು ಕೂಗುವ ಮೂಲಕ  ಸಂದೀಪ್‌ಗೆ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉನ್ನಿಕೃಷ್ಣನ್, ಮೇರು ವ್ಯಕ್ತಿತ್ವ ಹೊಂದಿದ್ದ ಸಂದೀಪ್ ಹುಟ್ಟುಹಬ್ಬ ಕೇವಲ ಆಚರಣೆಯಾಗದೆ, ಅದು ಶ್ರೇಷ್ಠ ವ್ಯಕ್ತಿತ್ವದ ಸ್ಮರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಆತನ ನೆನಪಿಗಾಗಿ ಸಾಕ್ಷ್ಯಚಿತ್ರ ನಿರ್ಮಾಣ ಸಿದ್ಧಪಡಿಸಬೇಕೆಂದಿದ್ದೇನೆ ಎಂದು ತಿಳಿಸಿದರು.

ಉಗ್ರರ ದಾಳಿಗೆ ಸಂದೀಪ್ ಬಲಿಯಾಗಿ 5 ವರ್ಷ ಕಳೆದರೂ ಇದುವರೆಗೂ ಉಗ್ರರನ್ನು ಶಿಕ್ಷಿಸದ ಕೇಂದ್ರ ಸರ್ಕಾರದ ಕ್ರಮವನ್ನು ಅಭಿಮಾನಿಗಳು ಖಂಡಿಸಿದರು. ಉಪ ಲೋಕಾಯುಕ್ತ ಮಜ್ಜಗೆ ಅವರು, ಸಂದೀಪ್ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ರಾಜ್ಯದ ಬಾಗಲಕೋಟೆ, ವಿಜಾಪುರ ಜಿಲ್ಲೆಗಳಿಂದ ಅಂಗವಿಕಲ ಅಭಿಮಾನಿಗಳು ಆಗಮಿಸಿ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಗಮನಿಸಿದರೆ ಸಂದೀಪ್ ಮೇಲೆ ಅವರಿಗಿರುವ ಪ್ರೀತಿ ಎಷ್ಟೆಂಬುದು ತಿಳಿಯುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ನೆನಪಿಗಾಗಿ ಪುಸ್ತಕಗಳನ್ನು ಹೊರತರಲು ಸರ್ಕಾರಗಳು ಮುಂದಾಗಬೇಕು ಎಂದರು.

ಬಾಗಲಕೋಟೆಯ ಅಂಗವಿಕಲ ಅಭಿಮಾನಿ ಘನಶ್ಯಾಮ್, ಸಂದೀಪ್‌ರಂತಹ ಹಲವಾರು ವೀರ ಯೋಧರ ಸಾವಿಗೆ ಕಾರಣರಾದ ಕಸಾಬ್, ಅಫ್ಜಲ್ ಗುರು ಅವರಂತಹ ದೇಶದ್ರೋಹಿಗಳನ್ನು ಶಿಕ್ಷಿಸುವಲ್ಲಿ ಕೇಂದ್ರ ಸರ್ಕಾರ ಏಕೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐಡಿಯಲ್ ಅಂಧರ ವಾದ್ಯ ವೃಂದ ನಡೆಸಿಕೊಟ್ಟ ದೇಶಭಕ್ತಿ ಗೀತೆಗಳು ಎಲ್ಲರನ್ನೂ ರೋಮಾಂಚನಗೊಳಿಸಿದವು. ಸುತ್ತಮುತ್ತಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.