ಬೆಂಗಳೂರು: ಅಖಿಲ ಹವ್ಯಕ ಮಹಾಸಭಾವು ನಗರದಲ್ಲಿ ಆಯೋಜಿಸಿದ್ದ ‘ಸಂಸ್ಕಾರೋತ್ಸವ’ವನ್ನು ಸಮುದಾಯದ ಸದಸ್ಯರು ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆ ವಿನಾಯಕನ ಪೂಜೆ ನೆರವೇರಿಸಿ ಮತ್ತು ಅಮೃತಬಳ್ಳಿ ನೆಡುವ ಮೂಲಕ ಯಕ್ಷಗಾನ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತರು ಉತ್ಸವಕ್ಕೆ ಚಾಲನೆ ನೀಡಿದರು.
‘ಉತ್ಸವಗಳು ಉತ್ಸಾಹದ ದ್ಯೋತಕವಾಗಿವೆ. ಅವುಗಳಿಂದ ಸಂಸ್ಕೃತಿಯ ಸಂಸ್ಕಾರಗಳು ನೆನಪಾಗುತ್ತವೆ. ಹವ್ಯಕ ಸಮುದಾಯದಲ್ಲಿನ ಸತ್ ಸಂಸ್ಕಾರಗಳನ್ನು ಸಮಾಜಕ್ಕೆ ಪರಿಚಯಿಸಲು ಇಂತಹ ಉತ್ಸವಗಳು ಅಗತ್ಯ’ ಎಂದು ಹೊಸ್ತೋಟ ಮಂಜುನಾಥ ಹೇಳಿದರು.
ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ್ ಕಜೆ, ‘ಹವ್ಯಕರು ಹುಟ್ಟಿನಿಂದಲೇ ಸಂಸ್ಕಾರಗಳನ್ನು ಪಡೆದುಕೊಂಡು ಬರುತ್ತಾರೆ. ಅವುಗಳನ್ನು ಬೆಳೆಸಲು, ಜಾಗೃತಗೊಳಿಸಲು ಉತ್ಸವ ಆಯೋಜಿಸಲಾಗಿದೆ. ಮನುಜನಲ್ಲಿ ಸಂಸ್ಕಾರದ ಬೇರುಗಳು ಗಟ್ಟಿಯಾಗಿದ್ದಾಗಲೇ, ಜೀವನವೆಂಬ ಮರ ಸಮೃದ್ಧವಾಗಿರುತ್ತದೆ’ ಎಂದರು.
ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್, ಜಗದೀಶ ಶರ್ಮ, ಡಾ. ಹಿತ್ಲಳ್ಳಿ ಸೂರ್ಯನಾರಾಯಣ್ ಭಟ್, ಕೂಟೇಲು ರಾಮಕೃಷ್ಣ ಭಟ್ ಅವರು ಹವ್ಯಕರ ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳ ಕುರಿತು ಉಪನ್ಯಾಸಗಳನ್ನು ನೀಡಿದರು.
ಕಲಾವಿದ ರಾಘವೇಂದ್ರ ಹೆಗಡೆ ಬಿಡಿಸಿದ ಮರಳು ಚಿತ್ರಗಳು, ಜಯಲಕ್ಷ್ಮಿ ಭಟ್ ಮತ್ತು ತಂಡದ ಸಂಗೀತ ಕಾರ್ಯಕ್ರಮ, ಮೋಹನ್ ಭಾಸ್ಕರ ಹೆಗಡೆ ತಂಡ ಪ್ರಸ್ತುತಪಡಿಸಿದ ಕರ್ಮಬಂಧ ತಾಳಮದ್ದಲೆ ಸಭಿಕರ ಮನಗೆದ್ದವು. ಹವ್ಯಕರ ಸಾಂಪ್ರದಾಯಿಕ ಅಡುಗೆಯ ತಿನಿಸುಗಳ ರುಚಿಯನ್ನು ಜನರು ಸವಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.