ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ದಾವಣಗೆರೆ ಉಪ ನಿರ್ದೇಶಕ ಕೆ.ರಾಮೇಶ್ವರಪ್ಪ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಸಚಿವರೊಬ್ಬರು ಅಡ್ಡಗಾಲು ಹಾಕಿದರು ಎಂದು ಗೊತ್ತಾಗಿದೆ.
ರಾಮೇಶ್ವರಪ್ಪ ಅವರು 1998ನೇ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಕುರಿತ ಇಲಾಖೆ ವಿಚಾರಣೆ ಪೂರ್ಣಗೊಂಡಿದೆ. ತನಿಖೆ ವೇಳೆ ಅವರು ಗುರುತರವಾದ ಅಪರಾಧ ಎಸಗಿರುವುದು ಸಾಬೀತಾಗಿದ್ದು, ಅದನ್ನು ಆಧರಿಸಿ ಶಿಸ್ತುಕ್ರಮ ಕೈಗೊಳ್ಳಲು ಇಲಾಖೆಯು ಸಂಪುಟದ ಅನುಮತಿ ಕೋರಿತ್ತು.
ಇಲಾಖೆಯ ಸಚಿವರು ಈ ವಿಷಯವನ್ನು ಸಂಪುಟದ ಮುಂದೆ ಪ್ರಸ್ತಾಪಿಸುತ್ತಿದ್ದಂತೆಯೇ, ಪ್ರಭಾವಿ ಸಚಿವರೊಬ್ಬರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಪ್ರಕರಣ ಹೈಕೋರ್ಟ್ನಲ್ಲಿದೆ. ಅಲ್ಲಿ ಇತ್ಯರ್ಥವಾಗುವುದಕ್ಕೆ ಮೊದಲೇ ಕ್ರಮಕೈಗೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು ಎನ್ನಲಾಗಿದೆ.
ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಈ ವಿಷಯವನ್ನು ಕಾನೂನು ಇಲಾಖೆಗೆ ಕಳುಹಿಸಿ, ಅಭಿಪ್ರಾಯ ಪಡೆಯಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಮುಂದಿನ ಸಚಿವ ಸಂಪುಟ ಸಭೆಯಲ್ಲೇ ಈ ವಿಷಯವನ್ನು ತರಬೇಕೆಂದು ಸೂಚಿಸಿದರು ಎಂದು ಗೊತ್ತಾಗಿದೆ.
`ಪ್ರಜಾವಾಣಿ~ಗೆ ಲಭ್ಯವಾಗಿರುವ ಮಾಹಿತಿ ಇಲಾಖಾ ವಿಚಾರಣೆಯಲ್ಲಿ ರಾಮೇಶ್ವರಪ್ಪ ಅವರನ್ನು ಸೇವೆಯಿಂದ ವಜಾ ಮಾಡಲು ಶಿಫಾರಸು ಮಾಡಲಾಗಿದೆ. ರಾಮೇಶ್ವರಪ್ಪ ಸೇರಿದಂತೆ ಅವರ ಕುಟುಂಬದ ಕೆಲವರು ಕೆಎಎಸ್ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಮೊದಲ ಹತ್ತು ರ್ಯಾಂಕ್ಗಳು ಒಂದೇ ಕುಟುಂದವರ ಪಾಲಾಗಿರುವುದು ಸಾಬೀತಾಗಿತ್ತು.
ಹೀಗಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅವರನ್ನು ಕಪ್ಪುಪಟ್ಟಿಗೆ ಸೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.