ADVERTISEMENT

ಸಶಸ್ತ್ರದಳಕ್ಕೆ ವಿಶೇಷಾಧಿಕಾರ; ಕಾಯ್ದೆ ಶೀಘ್ರ ಜಾರಿ ಅಗತ್ಯ: ಸಾಂಗ್ಲಿಯಾನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2012, 19:30 IST
Last Updated 28 ಫೆಬ್ರುವರಿ 2012, 19:30 IST
ಸಶಸ್ತ್ರದಳಕ್ಕೆ ವಿಶೇಷಾಧಿಕಾರ; ಕಾಯ್ದೆ ಶೀಘ್ರ ಜಾರಿ ಅಗತ್ಯ: ಸಾಂಗ್ಲಿಯಾನ
ಸಶಸ್ತ್ರದಳಕ್ಕೆ ವಿಶೇಷಾಧಿಕಾರ; ಕಾಯ್ದೆ ಶೀಘ್ರ ಜಾರಿ ಅಗತ್ಯ: ಸಾಂಗ್ಲಿಯಾನ   

ಬೆಂಗಳೂರು: `ಈಶಾನ್ಯ ರಾಜ್ಯಗಳಲ್ಲಿನ ಕಾನೂನು ಉಲ್ಲಂಘನೆಯ ಪ್ರವೃತ್ತಿಯನ್ನು ತಡೆಯಲು ಸಶಸ್ತ್ರದಳ ವಿಶೇಷಾಧಿಕಾರ ಕಾಯ್ದೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಬೇಕು~ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಎಚ್.ಟಿ. ಸಾಂಗ್ಲಿಯಾನ ಹೇಳಿದರು.

ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ `ಈಶಾನ್ಯ ರಾಜ್ಯಗಳ ಪ್ರಾತಿನಿಧ್ಯತೆ ಹಾಗೂ ರಾಜಕಾರಣದ ಅವಲೋಕನ~ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಭೌಗೋಳಿಕವಾಗಿ ಭಿನ್ನವಾಗಿರುವ ಈಶಾನ್ಯ ರಾಜ್ಯಗಳಾದ ಮಿಜೋರಾಂ, ನಾಗಾಲ್ಯಾಂಡ್ ಹಾಗೂ ಮಣಿಪುರಗಳಲ್ಲಿ ಶಿಕ್ಷಣದ ಮತ್ತು ಅರಿವಿನ ಕೊರತೆಯ ಕಾರಣದಿಂದಾಗಿ ಕಾನೂನು ಉಲ್ಲಂಘನೆ ಸೇರಿದಂತೆ ಹಲವು ಸಮಸ್ಯೆಗಳು ಬೆಳೆಯುತ್ತಿವೆ. ಇದರ ನಿಯಂತ್ರಣಕ್ಕಾಗಿ ಶಸಶ್ತ್ರದಳ ವಿಶೇಷಾಧಿಕಾರ ಕಾಯ್ದೆ ಈಶಾನ್ಯ ರಾಜ್ಯಗಳಲ್ಲಿ ಜಾರಿಗೆ ಬರಬೇಕು~ ಎಂದು ಅವರು ಆಶಿಸಿದರು.


`ದೇಶದಲ್ಲಿ ಮಾತ್ರವಲ್ಲದೇ ಜಗತ್ತಿನಲ್ಲಿಯೇ ಮಿಜೋರಾಂ ಸಂಸ್ಕೃತಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಭಾಷೆ ಹಾಗೂ ಆಚರಣೆಗಳ ನೆಲೆಯಿಂದ ತನ್ನದೇ ಆದ ಭಿನ್ನತೆ ಮಿಜೋರಾಂ ಸಂಸ್ಕೃತಿಗಿದೆ. ದೇಶದ ಇತರ ಭಾಗಗಳಿಗೆ ಹೋದಾಗ ಜನರು ನಮ್ಮನ್ನು ಪ್ರತ್ಯೇಕವಾಗಿಯೇ ನೋಡುತ್ತಾರೆ. ನಾನೂ ಬೆಂಗಳೂರಿಗೆ ಮೊದಲು ಬಂದಾಗ ಇಲ್ಲಿಯ ಜನರು ನನ್ನನ್ನು ಯಾವುದೋ ಅನ್ಯಗ್ರಹದಿಂದ ಬಂದವನು ಎಂಬಂತೆ ನೋಡುತ್ತಿದ್ದರು. ಆನಂತರ ಬೆಂಗಳೂರಿನ ಜನರು ತೋರಿದ ಆತ್ಮೀಯತೆಯನ್ನು ಮರೆಯಲಾಗದು~ ಎಂದು ಅವರು ಹೇಳಿದರು.

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಜೋಯ್ ಎಲ್. ಪಚೌನ್ ಮಾತನಾಡಿ, `ಜಗತ್ತಿನಲ್ಲಿಯೇ ಭಿನ್ನವಾದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಆಧುನಿಕತೆಯೊಂದಿಗೂ ಉಳಿಸಿಕೊಂಡಿರುವುದು ಮಿಜೋರಾಂ ಸಂಸ್ಕೃತಿಯ ಶ್ರೇಷ್ಠತೆ. ಮಿಜೋರಾಂ ಕ್ರಿಶ್ಚಿಯನ್ನರು ತಮ್ಮ ಗೀತೆಗಳು ಹಾಗೂ ಆಚರಣೆಗಳಿಂದ ಆಫ್ರಿಕನ್ ಜನಗಳಂತೆ ಜಗತ್ತಿನಲ್ಲಿಯೇ ವಿಶಿಷ್ಟ ಸಂಸ್ಕೃತಿ ರೂಪಿಸಿಕೊಂಡಿದ್ದಾರೆ.
 
ಶಿಕ್ಷಣದ ಕೊರತೆ ಹಾಗೂ ಹೆಚ್ಚಿನ ಸ್ವಾತಂತ್ರ್ಯದಿಂದಾಗಿ ಮಿಜೋರಾಂ ಯುವ ಜನರು ದಿಕ್ಕು ತಪ್ಪುತ್ತಿದ್ದಾರೆ. ಅನೇಕ ಯುವಕರು ಅನ್ಯ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರ ನಿವಾರಣೆಗಾಗಿ ಸರ್ಕಾರಗಳು ಈಶಾನ್ಯ ಭಾಗಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು~ ಎಂದು ಒತ್ತಾಯಿಸಿದರು.

ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ಜಾಫೆಟ್, ಸಹ ಪ್ರಧ್ಯಾಪಕ ಡಾ.ಅಜಿತ್ ಕುಮಾರ್ ಸೇರಿದಂತೆ ದೇಶದ ನಾನಾ ಭಾಗಗಳ ಮಿಜೋರಾಂ ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT