ಬೆಂಗಳೂರು: `ರಾಜ್ಯದಲ್ಲಿ ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತ ನಡೆಸುತ್ತಿರುವ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಹಾಗೂ ರಾಜಕೀಯ ಸ್ಥಿರತೆ ಮೂಡಬೇಕು~ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟ ಹಾಗೂ ಸಮಾನಮನಸ್ಕ ಸಂಘಟನೆಗಳು ಆಗ್ರಹಿಸಿವೆ.
ನಗರದ ಪುರಭವನದ ಮುಂಭಾಗದಲ್ಲಿ ಸೋಮವಾರ ಸಭೆ ನಡೆಸಿದ ಒಕ್ಕಲಿಗರ ಒಕ್ಕೂಟ, ಅಹಿಂದ, ಸಮತಾ ಸೈನಿಕ ದಳ, ದಲಿತ ಸಂಘರ್ಷ ಸಮಿತಿ (ಭೀಮವಾದ), ಅಖಿಲ ಕರ್ನಾಟಕ ಗಾಣಿಗರ ಸಂಘ, ಅಖಿಲ ಕರ್ನಾಟಕ ವೀರಶೈವ ಕ್ರಿಯಾವೇದಿಕೆ, ನವಕರ್ನಾಟಕ ಯುವಶಕ್ತಿ, ಅಖಿಲ ಕರ್ನಾಟಕ ದಲಿತ ಹಿಂದುಳಿದವರ ವೇದಿಕೆ, ಮಜೀದೆ-ಉತ್-ತಕ್ವ ಸಂಘಟನೆಯ ಮುಖಂಡರು ಸದಾನಂದ ಗೌಡರಿಗೆ ಬೆಂಬಲ ಘೋಷಿಸಿದರು.
`ಬಿಜೆಪಿಯ ಕೆಲವು ಸಚಿವರು ಹಾಗೂ ಶಾಸಕರು ರಾಜಕೀಯ ಅಸ್ಥಿರತೆಗೆ ಕಾರಣರಾಗಿದ್ದಾರೆ. ಅವರು ಇದೇ ಪ್ರವೃತ್ತಿ ಮುಂದುವರಿಸಿದರೆ ಒಕ್ಕಲಿಗರ ಒಕ್ಕೂಟದ ಜೊತೆಗೂಡಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಮುಖ್ಯಮಂತ್ರಿ ವಿರುದ್ಧ ಪಿತೂರಿ ಮಾಡುವವರಿಗೆ ಬುದ್ಧಿ ಕಲಿಸಲಾಗುವುದು~ ಎಂದು ಸಭೆಯಲ್ಲಿ ಎಚ್ಚರಿಸಲಾಯಿತು.
ರಾಜ್ಯ ಒಕ್ಕಲಿಗರ ಒಕ್ಕೂಟದ ಗೌರವಾಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮೇಲಿರುವ ಎಲ್ಲಾ ಪ್ರಕರಣಗಳಲ್ಲಿ ನಿರ್ದೋಷಿಯಾಗಿ ಸಾಬೀತಾಗಿ ಮುಖ್ಯಮಂತ್ರಿಯಾದರೆ ಜನರು ಬೆಂಬಲ ನೀಡುವರು. ಈಗ ನಡೆಸುತ್ತಿರುವ ಭಿನ್ನಮತೀಯ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕು~ ಎಂದರು.
ಒಕ್ಕೂಟದ ಅಧ್ಯಕ್ಷ ಎಂ.ಆರ್.ವೆಂಕಟೇಶ್, ವಿವಿಧ ಸಂಘಟನೆಗಳ ಮುಖಂಡರಾದ ಪ್ರೊ.ಎನ್.ವಿ.ನರಸಿಂಹಯ್ಯ, ಎಂ.ವೆಂಕಟಸ್ವಾಮಿ, ಆರ್.ಮೋಹನ್ರಾಜ್, ಎಂ.ಪಿ.ಹೇಮಾವತಿ, ರೇಣುಕಾ ಪ್ರಸಾದ್, ಅಕ್ಮಲ್ ಷರೀಫ್, ಪಿ.ಮೂರ್ತಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.