ADVERTISEMENT

ಸಿ.ಎಂ ವಿರುದ್ಧ ಮುಸ್ಲಿಂ ಮುಖಂಡರು ಗರಂ

ಅಲ್ಪಸಂಖ್ಯಾತರ ಸಮಾವೇಶಕ್ಕೆ ಗೈರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:57 IST
Last Updated 1 ಮಾರ್ಚ್ 2014, 19:57 IST

ಬೆಂಗಳೂರು: ಕೆಪಿಸಿಸಿ ಕಚೇರಿ ಆವರಣ­ದಲ್ಲಿ ಶನಿವಾರ ನಡೆದ ಅಲ್ಪಸಂಖ್ಯಾತರ ಸಮಾವೇಶಕ್ಕೆ ಗೈರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್‌ ಮತ್ತು ಶಾಸಕ ಎನ್‌.ಎ.­ಹ್ಯಾರಿಸ್‌ ಬಹಿರಂಗವಾಗಿಯೇ ಅಸಮಾ­ಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ­ಯವರು ಬಜೆಟ್‌ನಲ್ಲಿ ಅಲ್ಪಸಂಖ್ಯಾತ­ರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂಬ ಆಕ್ರೋಶವನ್ನೂ ವ್ಯಕ್ತಪಡಿಸಿದರು.

ವಾರ್ತಾ ಸಚಿವ ಆರ್‌.ರೋಷನ್‌ ಬೇಗ್‌ ಸೇರಿದಂತೆ ಬೆಂಗಳೂರಿನಿಂದ ಆಯ್ಕೆಯಾದ ಕಾಂಗ್ರೆಸ್‌ ಶಾಸಕರ ಪೈಕಿ ಹಲವರು ಸಮಾವೇಶಕ್ಕೆ ಗೈರಾಗಿದ್ದರು. ಈ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅಲ್ಪಸಂಖ್ಯಾತ ಮುಖಂಡರು, ಮುಸ್ಲಿ­ಮ­ರನ್ನು ಕೇವಲ ಮತ ಗಳಿಕೆ ದೃಷ್ಟಿ­ಯಿಂದ ನೋಡಬಾರದು ಎಂದು ಎಚ್ಚ­ರಿಕೆಯ ಧಾಟಿಯಲ್ಲಿ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇ­ಶ್ವರ್‌ ಕೂಡ ಅಲ್ಪಸಂಖ್ಯಾತ ಮುಖಂಡರ ಆಕ್ಷೇಪಗಳಿಗೆ ದನಿಗೂಡಿಸಿ­ದರು. ಮುಖ್ಯಮಂತ್ರಿ­ಯವರ ಜೊತೆ ಈ ಬಗ್ಗೆ ಚರ್ಚೆ ನಡೆಸುವ ಭರವಸೆಯನ್ನೂ ನೀಡಿದರು.

‘ರಾಜ್ಯದಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಮತಗಳು ಒಗ್ಗೂಡಿರುವುದರಿಂದ ಕಾಂಗ್ರೆಸ್‌ ಅಧಿ­ಕಾರಕ್ಕೆ ಬಂದಿದೆ. ಈ ವಿಷಯ ಸಿದ್ದ­ರಾಮಯ್ಯ ಅವರಿಗೂ ಗೊತ್ತು. ಎಷ್ಟೇ ಕಾರ್ಯದ ಒತ್ತಡ ಇದ್ದರೂ ಅವರು ಇಲ್ಲಿಗೆ ಬರಬೇಕಿತ್ತು. ಮುಸ್ಲಿಮ­ರನ್ನು ಮತ ಗಳಿಕೆಗೆ ಸೀಮಿತವಾಗಿ ನೋಡ­ಬೇಡಿ. ಕಾಳಜಿ ಮಾತಿಗೆ ಸೀಮಿತ ಆಗ­ಬಾರದು’ ಎಂದು ಜಾಫರ್‌ ಷರೀಫ್‌ ಹೇಳಿದರು.

‘ಯುವ ಜನರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡುವುದರ ಹೆಸರಿನಲ್ಲಿ ದೀರ್ಘಕಾಲದಿಂದ ಜನರ ವಿಶ್ವಾಸ ಗಳಿಸಿರುವ ನಾಯಕರಿಗೆ ಲೋಕಸಭಾ ಚುನಾವಣೆ ಟಿಕೆಟ್‌ ನಿರಾಕರಿಸ­ಬಾ­ರದು. ಹಿರಿಯ ನಾಯಕರು ಗಳಿಸಿ­ರುವ ಜನರ ವಿಶ್ವಾಸಕ್ಕೆ ಬೆಲೆ ನೀಡಬೇಕು. ಲೋಕಸಭೆಗೆ ಆಯ್ಕೆ­ಯಾಗುವ ಕಾಂಗ್ರೆಸ್‌ ಸಂಸದರು ಬಿಜೆಪಿ ನಾಯಕ­ರಾದ ಎಲ್‌.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್‌, ನರೇಂದ್ರ ಮೋದಿ ಮತ್ತಿತರರ ಮಾತಿನ ಬಾಣಗಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಹೊಂದಿರ­ಬೇಕು ಎಂಬುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.

ಹ್ಯಾರಿಸ್ ಮಾತನಾಡಿ, ‘ಮುಖ್ಯ­ಮಂತ್ರಿ­ಯವರು ₨ 1.38 ಲಕ್ಷ ಕೋಟಿ ಮೊತ್ತದ ಬಜೆಟ್‌ ಮಂಡಿಸಿ­ದ್ದಾರೆ. ಅಲ್ಪಸಂಖ್ಯಾತರಿಗೆ ಶೇಕಡ 1ರಷ್ಟು ಕೂಡ ಪಾಲು ನೀಡಿಲ್ಲ. ಈ ಅಸಮ­ತೋಲನವನ್ನು ತಕ್ಷಣವೇ ಸರಿಪಡಿಸ­ಬೇಕು. ಅಲ್ಪಸಂಖ್ಯಾತರಿಗೆ ಶೇ 15ರಷ್ಟು ಅನುದಾನ ನೀಡಬೇಕು’ ಎಂದರು.

ಪರಮೇಶ್ವರ್ ಅಚ್ಚರಿ: ‘ಮುಖ್ಯಮಂತ್ರಿ­ಯವರು ಒಂಬತ್ತನೇ ಬಾರಿ ಬಜೆಟ್‌ ಮಂಡಿಸಿದ್ದಾರೆ. ಈ ಬಾರಿ ಅವರು ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಶೇ 1ರಷ್ಟು ಅನುದಾನ ಕೂಡ ನೀಡಿಲ್ಲ ಎಂಬ ಮಾಹಿತಿ ಕೇಳಿ ನನಗೆ ಆಶ್ಚರ್ಯ­ವಾಗುತ್ತದೆ. ಈ ಬಗ್ಗೆ ಅವರ ಜೊತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ಮೋದಿ ಪ್ರಚಾರದ ಲೆಕ್ಕ ಕೊಡುತ್ತಾರಾ?
‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಟಿ.ವಿ ಮೂಲಕ ನಡೆಸುತ್ತಿರುವ ಪ್ರಚಾರ ಹಾಗೂ ಜಾಹೀರಾತುಗಳಿಗೆ ಮಾಡುತ್ತಿರುವ ವೆಚ್ಚದ ಕುರಿತು ಲೆಕ್ಕ ಕೊಡುತ್ತಾರೆಯೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಪ್ರಶ್ನಿಸಿದರು.

‘ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಪ್ರಚಾರ ಕಾರ್ಯಕ್ರಮಗಳ ಲೆಕ್ಕ ನೀಡಲು ಕಾಂಗ್ರೆಸ್‌ ಸಿದ್ಧವಿದೆ. ಆದರೆ ಬಿಜೆಪಿ ಲೆಕ್ಕವನ್ನು ಬಹಿರಂಗ­ಪಡಿಸಲು ಸಿದ್ಧವಿದೆಯೇ’ ಎಂದು ಸವಾಲು ಹಾಕಿದರು.

‘ಮೋದಿ ಅವರು ರಾಜ್ಯಕ್ಕೆ ಬಂದಾಗ ಬಿ.ಎಸ್‌.­ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿ­ಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡು­ತ್ತಾರೆ. ಈ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇದೆಯೇ?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT