ADVERTISEMENT

ಸಿಗ್ನಲ್‌ಗಳಲ್ಲಿ ಜಿಪಿಎಸ್‌ ವ್ಯವಸ್ಥೆ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST

ಬೆಂಗಳೂರು: ಆಂಬುಲೆನ್ಸ್‌ಗಳು ಹಾಗೂ ಅಗ್ನಿಶಾಮಕ ವಾಹನಗಳಿಗೆ ಸಿಗ್ನಲ್‌ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಜಿಪಿಎಸ್‌ ವ್ಯವಸ್ಥೆಯನ್ನು ನಗರದ ಎಂ.ಎಸ್‌.ರಾಮಯ್ಯ ಕಾಲೇಜು ಜಂಕ್ಷನ್‌ ಮತ್ತು ಶೇಷಾದ್ರಿ­ಪುರ ಸಿಗ್ನಲ್‌ನಲ್ಲಿ ಅಳವಡಿಸಲಾಗಿದೆ.

ನಾಗರಿಕರ ಸುರಕ್ಷತೆ ದೃಷ್ಟಿಯಿಂದ ವಾಹನ ದಟ್ಟಣೆ ಹೆಚ್ಚಿರುವ ಸಿಗ್ನಲ್‌ಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಅಗ್ನಿಶಾಮಕ ಇಲಾಖೆ ಹಾಗೂ ಆರೋಗ್ಯ ಇಲಾಖೆ ನಿರ್ಧರಿಸಿದ್ದು, ಇದರ ಭಾಗವಾಗಿ ಸದ್ಯ ಎರಡು ಜಂಕ್ಷನ್‌ಗಳಲ್ಲಿ ಜಿಪಿಎಸ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಈ ಸಿಗ್ನಲ್‌ಗಳ ಮೂಲಕ ಸಾಗುವ ತುರ್ತು ವಾಹನಗಳು ಸಿಗ್ನಲ್‌ಗಾಗಿ ಕಾಯಬೇಕಾದ ಅಗತ್ಯವಿಲ್ಲ.

ಜಿಪಿಎಸ್‌ ನೆರವಿನಿಂದ ತುರ್ತು ವಾಹನಗಳು ಒಂದು ಕಿ.ಮೀ ದೂರದಲ್ಲಿ ಬರುವಾಗಲೇ ಸಿಗ್ನಲ್‌ಗಳಲ್ಲಿ ಸ್ವಯಂಚಾಲಿತವಾಗಿ ದಾರಿ ಮಾಡಿಕೊಡುವ ಈ ಯೋಜನೆಯನ್ನು ಅಮೆರಿಕಾ ಮೂಲದ ‘ವಿಜಿಲೆಂಟ್ ಟೆಕ್ನಾಲಜಿ ಇಂಡಿಯಾ’ ಕಂಪೆನಿ ಅಭಿವೃದ್ಧಿಪಡಿಸಿದೆ. ಇದನ್ನು ಕಳೆದ ತಿಂಗಳು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿ ಮೇರೆಗೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗುವುದುೆ’ ಎಂದು ಸಂಚಾರ ವಿಭಾಗದ ಎಸಿಪಿ ಕನಕಕುಮಾರ್‌ ತಿಳಿಸಿದರು.

ತುರ್ತು ವಾಹನದಲ್ಲಿ ಒಂದು ಜಿಪಿಎಸ್ ಆಧಾರಿತ ಟವರ್ ಹಾಗೂ ಸಿಗ್ನಲ್‌ಗಳಲ್ಲಿ ಒಂದು ಸಣ್ಣ ಟವರ್ ಅಳವಡಿಸಲಾಗಿರುತ್ತದೆ. ಇವುಗಳ ನಡುವೆ ಸಂಪರ್ಕ ಒದಗಿಸಲು ಜಂಕ್ಷನ್‌ ಬಳಿ ಯೂನಿಟ್ ಇದೆ.  ತುರ್ತು ವಾಹನಗಳನ್ನು ಚಾಲನೆ ಮಾಡಿ­ಕೊಂಡು ಬರುವಾಗ ಟವರ್ ಪೆಟ್ಟಿಗೆಯ­ಲ್ಲಿರುವ ಸ್ವಿಚ್ ಹೊತ್ತಿಸಿದರೆ, ಆ ವಾಹನ ಇರುವ ಸ್ಥಳ, ಎಷ್ಟು ವೇಗದಲ್ಲಿ ಚಲಿಸುತ್ತಿದೆ, ಸಿಗ್ನಲ್‌ಗೆ ಬರಲು ಎಷ್ಟು ಕಾಲಾವಕಾಶ ಬೇಕಾಗುತ್ತದೆ ಸೇರಿದಂತೆ ಮತ್ತಿತರ ಮಾಹಿತಿಗಳು ಯೂನಿಟ್‌ನಲ್ಲಿ ಸಂಗ್ರಹವಾಗಿ ಆ ವಾಹನ ಸಿಗ್ನಲ್‌ಗೆ ಸಮೀಪಿಸುತ್ತಿದ್ದಂತೆ ಸ್ವಯಂಚಾಲಿ­ತವಾಗಿ ಹಸಿರು ದೀಪ ಬೀಳುತ್ತದೆ’ ಎಂದು ವಿಜಿಲೆಂಟ್‌ ಟೆಕ್ನಾಲಜಿ ಇಂಡಿಯಾದ ನಿರ್ದೇಶಕ ಜಿ.ಎಲ್‌.ಗಣೇಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.