ADVERTISEMENT

ಸಿ.ಡಿ.ಯಲ್ಲಿ ಸಂಕ್ಷೇಪ ರಾಮಾಯಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST
ಸಿ.ಡಿ.ಯಲ್ಲಿ ಸಂಕ್ಷೇಪ ರಾಮಾಯಣ
ಸಿ.ಡಿ.ಯಲ್ಲಿ ಸಂಕ್ಷೇಪ ರಾಮಾಯಣ   

ಬೆಂಗಳೂರು: `ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಕೃತಿಗಳನ್ನು ರಕ್ಷಿಸುವ ಹೊಣೆ ಸಮಾಜದ ಮೇಲಿದೆ~ ಎಂದು ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ತಿಳಿಸಿದರು.

ಹೊಸೂರಿನ ವೇಣುಗೋಪಾಲಸ್ವಾಮಿ ಶಿಕ್ಷಣ ಟ್ರಸ್ಟ್ ಮತ್ತು ಲಹರಿ ರೆಕಾರ್ಡಿಂಗ್ ಕಂಪೆನಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಸಂಕ್ಷೇಪ ರಾಮಾಯಣ~, `ಕವಿ ಡಿ.ವಿ.ಗುಂಡಪ್ಪ ಅವರ ಅಂತಃಪುರ ಗೀತೆಗಳು~ ಹಾಗೂ `ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಕೃತಿಗಳ~ ಮೂರು ಸಿಡಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಕುಟುಂಬದ ಹಿರಿಯರು ಹಿಂದೆ ಕಥೆಗಳನ್ನು ಹೇಳುತ್ತಿದ್ದರು. ಆದರೆ ಈಗಿನ ತಂದೆ ತಾಯಿಗಳಿಗೆ ಕಥೆ ಹೇಳಲು ಬಿಡುವಿಲ್ಲದಂತಾಗಿದೆ. ತ್ಯಾಗರಾಜರು, ಪುರಂದರದಾಸರಂತಹ ಕೀರ್ತನಕಾರರ ಬಗ್ಗೆ ಯುವಕರಿಗೆ ಪರಿಚಯವೇ ಇಲ್ಲ. ಇಂತಹ ಸಂದರ್ಭದಲ್ಲಿ ಸಿಡಿಯಂತಹ ಆಧುನಿಕ ತಂತ್ರಜ್ಞಾನ ಬಳಸಿ ಶ್ರೇಷ್ಠ ಕೃತಿಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಅಗತ್ಯ~ ಎಂದು ಅವರು ಹೇಳಿದರು.

`ಈಗ ಸಂಗೀತ ಕಾರ್ಯಕ್ರಮ ನೀಡಲು ಹಾತೊರೆಯುವ ಸಂಗೀತಗಾರರೇ ಹೆಚ್ಚು. ಆಳ ಅಧ್ಯಯನ ಮಾಡಿದಾಗ ಮಾತ್ರ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯ. ತಪಸ್ಸಿನಂತೆ ಕಲಿತಾಗ ಮಾತ್ರ ಸಂಗೀತ ಉಳಿಯುತ್ತದೆ~ ಎಂದರು.

ಲಹರಿ ಸಂಸ್ಥೆಯ ವೇಲು ಮಾತನಾಡಿ, `ಸಂಗೀತ ಸಾಹಿತ್ಯ ಇರುವವರೆಗೂ ಸಮಾಜ ನೆಮ್ಮದಿಯಿಂದ ಬಾಳುತ್ತದೆ. ಕಾಲ ಕಾಲಕ್ಕೆ ಮಳೆ ಬೆಳೆ ಆಗುತ್ತದೆ. ಆಗ ಎಷ್ಟೇ ಕೆಟ್ಟವರು, ಭ್ರಷ್ಟಾಚಾರಿಗಳಿದ್ದರೂ ತೊಂದರೆ ಉಂಟಾಗುವುದಿಲ್ಲ~ ಎಂದು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಕೆ.ವಿ. ರವೀಂದ್ರನಾಥ್ ಟ್ಯಾಗೋರ್, `ರಾಜಕಾರಣಿಗಳಿಗೆ ಕಡ್ಡಾಯವಾಗಿ ಸಂಗೀತ ಕಾರ್ಯಕ್ರಮಗಳನ್ನು ಕೇಳುವಂತೆ ನಿಯಮ ರೂಪಿಸಬೇಕು. ಆಗ ರಾಜಕಾರಣಿಗಳ ನಿಲುವು ಬದಲಾಗುತ್ತದೆ. ಪರಪ್ಪನ ಅಗ್ರಹಾರಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತದೆ.~ ಎಂದು ಚಟಾಕಿ ಹಾರಿಸಿದರು.

ಹರಿದಾಸ ಸಂಘದ ಅಧ್ಯಕ್ಷ ನಾಗರಾಜಾಚಾರ್ಯ, ಬಿಜೆಪಿ ಮುಖಂಡ ವಾಮನಾಚಾರ್ಯ, ಉದ್ಯಮಿ ಶ್ರೀನಿವಾಸ ಮೂರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ಗಾಯಕ ವಿದ್ವಾನ್ ಎಂ.ಜಿ.ವೆಂಕಟರಾಘವನ್ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕೆ.ಎಸ್.ರಾಮಾನುಜನ್, ನಾದಹಂಸ ಸಂಗೀತ ಅಕಾಡೆಮಿ ಕಾರ್ಯದರ್ಶಿ ಸುನೀತಾ ವೆಂಕಟರಾಘವನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.