ADVERTISEMENT

ಸೇತುವೆಯ ತಡೆಗೋಡೆಗೆ ಬಿರುಕು

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಮಹದೇವಪುರ: ಕ್ಷೇತ್ರದ ವರ್ತೂರು ಗ್ರಾಮದ ಬಳಿ ಕೆರೆ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲಾವಸ್ಥೆಯಲ್ಲಿದೆ. ಸೇತುವೆಯ ಎರಡು ಬದಿಯ ತಡೆಗೋಡೆ ಬಿರುಕು ಬಿಟ್ಟಿದ್ದು ಈಗಲೋ ಆಗಲೋ ಮುರಿದು ಬೀಳುವ ಸ್ಥಿತಿಯಲ್ಲಿದೆ.

ಅಲ್ಲದೆ, ಸೇತುವೆಯ ಮೇಲಿನ ಪಾದಚಾರಿ ಮಾರ್ಗವೂ ಕುಸಿದು ಬಿದ್ದಿದೆ. ಇದರಿಂದಾಗಿ ಸಾರ್ವಜನಿಕರು ಸರಾಗವಾಗಿ ಓಡಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.ಆರೇಳು ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಈ ಸೇತುವೆಯು ಸುಸಜ್ಜಿತವಾಗಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.
 
ಈ ಸೇತುವೆಯ ಪಕ್ಕದಲ್ಲಿಯೇ ಮೈಸೂರು ಮಹಾರಾಜರ ಕಾಲಾವಧಿಯಲ್ಲಿ ನಿರ್ಮಾಣಗೊಂಡಿದ್ದ ಹಳೆ ಸೇತುವೆಯೂ ಇದೆ. ಕೆಲ ವರ್ಷಗಳ ಹಿಂದೆ ಅದು ಶಿಥಿಲಗೊಂಡು ಕುಸಿದು ಬೀಳುತ್ತಿದ್ದಂತೆಯೇ ಈ ಸೇತುವೆಯನ್ನು ನಿರ್ಮಾಣ ಮಾಡಲಾಯಿತು. ಆದರೆ, ಸೇತುವೆಯ ಕಾಮಗಾರಿ ಕಳಪೆಯಾದ ಹಿನ್ನೆಲೆಯಲ್ಲಿ ಸೇತುವೆ ಇದೀಗ ಅಲ್ಲಲ್ಲಿ ಕುಸಿದು ಬೀಳುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

 ಇದಕ್ಕೂ ಮುನ್ನ ಸೇತುವೆಯನ್ನು ಉದ್ಘಾಟಿಸಿದ ಸಂದರ್ಭದಲ್ಲಿಯೇ ಪಾದಚಾರಿ ಮಾರ್ಗ ಕುಸಿದು ಬಿದ್ದಿತ್ತು. ಆದರೂ, ಗುತ್ತಿಗೆದಾರರು ಅದನ್ನು ಸರಿಪಡಿಸುವ ಬಗ್ಗೆ ಕಿಂಚಿತ್ತೂ ಗಮನಹರಿಸಲಿಲ್ಲ. ಹಾಗಾಗಿಯೇ ಸೇತುವೆ ಹಂತ- ಹಂತವಾಗಿ ಕುಸಿದು ಬೀಳುತ್ತಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.