ADVERTISEMENT

ಹಕ್ಕುಪತ್ರ ವಿತರಣೆ ವಿಳಂಬ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 18:30 IST
Last Updated 21 ಅಕ್ಟೋಬರ್ 2012, 18:30 IST
ಹಕ್ಕುಪತ್ರ ವಿತರಣೆ ವಿಳಂಬ: ಪ್ರತಿಭಟನೆ
ಹಕ್ಕುಪತ್ರ ವಿತರಣೆ ವಿಳಂಬ: ಪ್ರತಿಭಟನೆ   

ನೆಲಮಂಗಲ:  ಆಶ್ರಯ ನಿವೇಶನದ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸದಿರುವುದನ್ನು ಖಂಡಿಸಿ ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲ್ಕೂರು ಗ್ರಾಮಸ್ಥರು ತಾ.ಪಂ. ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

`ಆಶ್ರಯ ನಿವೇಶನ ಹಂಚಿಕೆ ಮಾಡಲು ಮೀಸಲಿದ್ದ ಜಾಗವು ವಿವಾದದ ಕಾರಣ 37 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ಹಕ್ಕುಪತ್ರ ವಿತರಿಸುವಂತೆ ಆದೇಶ ಹೊರಡಿಸಲಾಗಿತ್ತು. ಹಕ್ಕುಪತ್ರಗಳನ್ನು ವಿತರಿಸಲು ತಾ. ಪಂ. ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿತರಿಸದೆ ಅನ್ಯಾಯ ಮಾಡಲಾಗಿತ್ತು~ ಎಂದು ಪ್ರತಿಭಟನಾಕಾರರು ದೂರಿದರು.

`ರಾಜಕೀಯ ದುರುದ್ದೇಶದಿಂದ ಹಕ್ಕುಪತ್ರ ವಿತರಣೆಯಲ್ಲಿ ವಿಳಂಬ ಮಾಡಲಾಗುತ್ತಿದೆ~ ಎಂದು ದೂರಿ ತಾ.ಪಂ.ಸದಸ್ಯೆ ಭಾಗ್ಯಲಕ್ಷ್ಮೀ ಮತ್ತಿತರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ತಾ.ಪಂ.ಅಧ್ಯಕ್ಷ ರಂಗಸ್ವಾಮಿ, ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಸ್ಥಳಕ್ಕೆ ಆಗಮಿಸಿ, `15 ದಿನಗಳಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.
 
ಹಕ್ಕುಪತ್ರ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು. ಕೊನೆಗೆ ಸ್ಥಳದಲ್ಲಿಯೇ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೂಲಕ ಹಕ್ಕುಪತ್ರಗಳನ್ನು ಹಸ್ತಾಂತರಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥನಾರಾಯಣ ಗೌಡ, ಮುಖಂಡರಾದ ಗಂಗ ರಾಜು, ನಾಗರತ್ನ, ತೋಪಯ್ಯ, ಅಂಜನಾಮೂರ್ತಿ, ಶ್ರೀನಿವಾಸ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.