ADVERTISEMENT

ಹಾಪ್‌ಕಾಮ್ಸ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ಬೆಂಗಳೂರು: ಸೇವಾ ಜೇಷ್ಠತೆ ಆಧಾರದ ಮೇಲೆ ಸಿಬ್ಬಂದಿಗೆ ಬಡ್ತಿ ನೀಡಬೇಕು ಮತ್ತು ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹಾಪ್‌ಕಾಮ್ಸ ನೌಕರರು ಲಾಲ್‌ಬಾಗ್‌ನಲ್ಲಿರುವ ಹಾಪ್‌ಕಾಮ್ಸ ಆಡಳಿತ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಹಾಪ್‌ಕಾಮ್ಸ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ವಿ.ಶಿವಣ್ಣ, `40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರ ಸೇವಾ ಜೇಷ್ಠತೆ ಪರಿಗಣಿಸಿ ಬಡ್ತಿ ನೀಡದೇ ಒಕ್ಕೂಟದ ಆಡಳಿತ ಮಂಡಳಿ ನೌಕರರಿಗೆ ಅನ್ಯಾಯ ಮಾಡುತ್ತಿದೆ.

ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರದೆ ನೌಕರರನ್ನು ವಂಚಿಸಲಾಗುತ್ತಿದೆ. ಆಡಳಿತ ಮಂಡಳಿಯ ಸದಸ್ಯರು ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದವರನ್ನು ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದಾರೆ' ಎಂದು ದೂರಿದರು.

`ನಮ್ಮ ಸಮಸ್ಯೆಗಳ ಬಗ್ಗೆ ಏಳು ಬಾರಿ ಆಡಳಿತ ಮಂಡಳಿ ಹಾಗೂ ತೋಟಗಾರಿಕಾ ಸಚಿವರಿಗೆ ಮನವಿ ಪತ್ರ ನೀಡಿದ್ದೇವೆ. ಆದರೆ, ಈವರೆಗೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ. ಜೂನ್ ತಿಂಗಳಲ್ಲೇ ಆಡಳಿತ ಮಂಡಳಿಗೆ ಪತ್ರ ನೀಡಿ ಪ್ರತಿಭಟನೆಯ ಬಗ್ಗೆ ತಿಳಿಸಿದ್ದೆವು' ಎಂದು ಹೇಳಿದರು.

`ಪ್ರತಿಭಟನೆಯ ನಂತರ ಮಧ್ಯಾಹ್ನದ ಮೇಲೆ ಮಳಿಗೆಗಳನ್ನು ತೆರೆಯಲಾಯಿತು. ಆದರೆ, ಪ್ರತಿಭಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಹಾಪ್‌ಕಾಮ್ಸ ಅಧ್ಯಕ್ಷರು ಹೇಳುತ್ತಿದ್ದಾರೆ. ಇದು ಸರಿಯಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.