ADVERTISEMENT

ಹೊಸ ವಿಷಯಗಳನ್ನು ಬಿಚ್ಚಿಟ್ಟ ‘ನಿರುಪಮ ನಿರ್ಣಯ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 20:00 IST
Last Updated 18 ಜೂನ್ 2017, 20:00 IST
ಪ್ರೀತಿ ಶುಭಚಂದ್ರ ಹಾಗೂ ಎಸ್‌.ಎನ್‌. ಅಶೋಕ್‌ ಕುಮಾರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪದ್ಮಿನಿ ನಾಗರಾಜು, ಮಂಡಳಿ ಅಧ್ಯಕ್ಷ ಎಸ್‌.ಕೆ. ದೇವೇಂದ್ರನ್‌, ಪಿ.ವಿ. ನಾರಾಯಣ್‌, ಡಾ. ಹಂಪ ನಾಗರಾಜಯ್ಯ, ಬಿ. ಪ್ರಸನ್ನಯ್ಯ ಇದ್ದರು
ಪ್ರೀತಿ ಶುಭಚಂದ್ರ ಹಾಗೂ ಎಸ್‌.ಎನ್‌. ಅಶೋಕ್‌ ಕುಮಾರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪದ್ಮಿನಿ ನಾಗರಾಜು, ಮಂಡಳಿ ಅಧ್ಯಕ್ಷ ಎಸ್‌.ಕೆ. ದೇವೇಂದ್ರನ್‌, ಪಿ.ವಿ. ನಾರಾಯಣ್‌, ಡಾ. ಹಂಪ ನಾಗರಾಜಯ್ಯ, ಬಿ. ಪ್ರಸನ್ನಯ್ಯ ಇದ್ದರು   

ಬೆಂಗಳೂರು: ‘ಮೈಸೂರಿನ ರಾಜ ಚಿಕ್ಕದೇವರಾಯನ ಕಾಲದಲ್ಲಿ ಜೈನರು ಅನುಭವಿಸಿದ ಕಷ್ಟಗಳನ್ನು ಚಿದಾನಂದ ಕವಿ ‘ನಿರುಪಮ ನೀತಿ ನಿರ್ಣಯ’ ಕೃತಿಯಲ್ಲಿ ವಿಸ್ತೃತವಾಗಿ ವಿವರಿಸಿದ್ದಾನೆ’ ಎಂದು ಲೇಖಕಿ ಪ್ರೀತಿ ಶುಭಚಂದ್ರ ತಿಳಿಸಿದರು.

ಸಾಲಿಗ್ರಾಮ ಜೈನ ಮಿತ್ರ ಮಂಡಳಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘16ನೇ ವಾರ್ಷಿಕೋತ್ಸವ–ಪ್ರಶಸ್ತಿ ಪ್ರದಾನ, ವಿಚಾರಸಂಕಿರಣ’ದಲ್ಲಿ ಕೃತಿಯ ಕುರಿತು ಅವರು ಮಾತನಾಡಿದರು.

‘ಶ್ರವಣಬೆಳಗೊಳದ ಚಾರುಕೀರ್ತಿ ಪಂಡಿತ ಯೋಗಿಯ ಆತ್ಮಚರಿತ್ರಾತ್ಮಕವಾದ ಪ್ರಾಚೀನ ಕೃತಿ ಇದಾಗಿದೆ. ಜೈನ ಸಮುದಾಯ ಕಟ್ಟುವಲ್ಲಿ ಚಾರಿತ್ರಿಕವಾಗಿ  ನಡೆದ ಅನೇಕ ಹೊಸ ವಿಷಯಗಳನ್ನು ಈ ಕೃತಿ ತಿಳಿಸಿಕೊಡುತ್ತದೆ’ ಎಂದರು.

ADVERTISEMENT

ಬೊಪ್ಪಣ್ಣ ಪಂಡಿತರ ‘ಗೊಮ್ಮಟ ಸ್ತುತಿ’ ಕುರಿತು ಮಾತನಾಡಿದ ವಿಮರ್ಶಕ ಪಿ.ವಿ. ನಾರಾಯಣ್, ‘ಶಾಸನ ಕಾವ್ಯದ ಸೌಂದರ್ಯಕ್ಕಾಗಿ ಈ ಕೃತಿಯನ್ನು ಮೆಚ್ಚಬಹುದು. ಇದರಲ್ಲಿ ಒಟ್ಟು 32 ಪದ್ಯಗಳಿವೆ. 27 ಪದ್ಯಗಳಲ್ಲಿ ಬಾಹುಬಲಿಯ ಕಥೆಯ ನೆನಪು, ಗೊಮ್ಮಟ ಮೂರ್ತಿಯ ವೈಶಿಷ್ಟ್ಯ ಹಾಗೂ ಆಗ ಅವರು ಕಂಡ ಮಸ್ತಕಾಭಿಷೇಕದ ಸೌಂದರ್ಯವನ್ನು ಕಟ್ಟಿಕೊಟ್ಟಿದ್ದಾರೆ’ ಎಂದು ತಿಳಿಸಿದರು. 

ಪ್ರೀತಿ ಶುಭಚಂದ್ರ ಅವರಿಗೆ ‘ಸುಮವಸಂತ’ ಸಾಹಿತ್ಯ ದತ್ತಿ ಪ್ರಶಸ್ತಿ, ಗೊಮ್ಮಟವಾಣಿ ಪತ್ರಿಕೆಯ ಸಂಪಾದಕ ಎಸ್‌.ಎನ್‌. ಅಶೋಕ್‌ ಕುಮಾರ್‌ ಅವರಿಗೆ ‘ಶ್ರೇಯೋಭದ್ರ’ ಪ್ರಶಸ್ತಿ ನೀಡಲಾಯಿತು.ಲೇಖಕಿ ಪದ್ಮಿನಿ ನಾಗರಾಜ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಬಿ. ಪ್ರಸನ್ನಯ್ಯ, ಕರ್ನಲ್‌ ಆರ್‌. ಅಶೋಕ್‌ ಅವರನ್ನೂ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.