ಬೆಂಗಳೂರು: ಬಹುರಾಷ್ಟ್ರೀಯ ಕಂಪೆನಿಗಳನ್ನು (ಎಂಎನ್ಸಿ) ದೇಶದಿಂದ ತೊಲಗಿಸಲು ಕಾರ್ಮಿಕರ ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(ಟಿಯುಸಿಐ) ರಾಜ್ಯ ಘಟಕದ ಅಧ್ಯಕ್ಷ ಆರ್. ಮಾನಸಯ್ಯ ಹೇಳಿದರು.
ಗಾಂಧಿ ಭವನದಲ್ಲಿ ಮಂಗಳವಾರ ಟಿಯುಸಿಐ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಂಡವಾಳ ಹೂಡಿಕೆದಾರರ ಹೆಸರಿನಲ್ಲಿ ವಿದೇಶಿ ಕಂಪೆನಿಗಳು ಮತ್ತೆ ಭಾರತದಲ್ಲಿ ನೆಲೆಯೂರುತ್ತಿವೆ ಎಂದರು.
ಕೇಂದ್ರದಲ್ಲಿ ಆಡಳಿತಕ್ಕೆ ಬರುವ ಪಕ್ಷಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡುತ್ತಿವೆ. ಆ ಮೂಲಕ ಸರ್ಕಾರದಲ್ಲಿ ನಿಯಂತ್ರಣ ಸಾಧಿಸುತ್ತಿವೆ. ಕಾರ್ಮಿಕ ಪರವಾದ ಕಾನೂನುಗಳನ್ನು ಬದಲಿಸುವಷ್ಟು ಬಲಿಷ್ಠವಾಗಿವೆ. ಇದನ್ನು ತಡೆಯಲು ಕಾರ್ಮಿಕ ಶಕ್ತಿಯ ಒಗ್ಗಟ್ಟಿನ ಹೋರಾಟ ಒಂದೇ ದಾರಿ ಎಂದು ಅಭಿಪ್ರಾಯಪಟ್ಟರು.ಕಾಂಗ್ರೆಸ್ ಮತ್ತು ಬಿಜೆಪಿ ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿವೆ. ಕಾರ್ಮಿಕರ ಹಿತ ಬಯಸುವ ಪಕ್ಷಗಳು ಇಲ್ಲವಾಗಿವೆ. ಹಾಗಾಗಿ ಕಾರ್ಮಿಕರೇ ಒಟ್ಟಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದರು.
ಬಹುರಾಷ್ಟ್ರೀಯ ಕಂಪೆನಿಗಳನ್ನು ದೇಶ ಬಿಟ್ಟು ತೊಲಗಿಸಲು ಆಗ್ರಹಿಸಿ ಸೆ.2 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕಾರ್ಮಿಕರು ಮುಷ್ಕರ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.