ADVERTISEMENT

‘ದಕ್ಷಿಣ’ದಲ್ಲಿ ಮತ್ತೆ ಅನಂತ ಆಧಿಪತ್ಯ

​ಪ್ರಜಾವಾಣಿ ವಾರ್ತೆ
Published 16 ಮೇ 2014, 19:59 IST
Last Updated 16 ಮೇ 2014, 19:59 IST
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸತತ ಆರನೇ ಬಾರಿಗೆ ಜಯ ಗಳಿಸಿದ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್‌ ಅವರು ವಿಜಯೋತ್ಸವದ ಮೆರವಣಿಗೆಯಲ್ಲಿ ವಿಜಯದ ಸಂಕೇತ ತೋರಿಸಿದರು. ಶಾಸಕ ಬಿ.ಎನ್‌.ವಿಜಯ ಕುಮಾರ್‌, ಅನಂತ ಕುಮಾರ್‌ ಪತ್ನಿ ತೇಜಸ್ವಿನಿ, ಶಾಸಕ ಸತೀಶ್‌ ರೆಡ್ಡಿ ಮತ್ತಿತರರು ಚಿತ್ರದಲ್ಲಿದ್ದಾರೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸತತ ಆರನೇ ಬಾರಿಗೆ ಜಯ ಗಳಿಸಿದ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್‌ ಅವರು ವಿಜಯೋತ್ಸವದ ಮೆರವಣಿಗೆಯಲ್ಲಿ ವಿಜಯದ ಸಂಕೇತ ತೋರಿಸಿದರು. ಶಾಸಕ ಬಿ.ಎನ್‌.ವಿಜಯ ಕುಮಾರ್‌, ಅನಂತ ಕುಮಾರ್‌ ಪತ್ನಿ ತೇಜಸ್ವಿನಿ, ಶಾಸಕ ಸತೀಶ್‌ ರೆಡ್ಡಿ ಮತ್ತಿತರರು ಚಿತ್ರದಲ್ಲಿದ್ದಾರೆ   

ಬೆಂಗಳೂರು: ರಾಷ್ಟ್ರೀಯ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರದ (ಆಧಾರ್‌) ಮುಖ್ಯಸ್ಥ ನಂದನ್‌ ನಿಲೇಕಣಿ ಅವರ ಸ್ಪರ್ಧೆಯಿಂದ ದೇಶದ ಗಮನ ಸೆಳೆದ ಪ್ರತಿಷ್ಠಿತ ‘ಬೆಂಗಳೂರು ದಕ್ಷಿಣ’ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅನಂತ ಕುಮಾರ್‌ ಮೇಲುಗೈ ಸಾಧಿಸಿದ್ದಾರೆ.

ನಿಲೇಕಣಿ ಅವರನ್ನು 2,28,575 ಮತಗಳ ಭಾರಿ ಅಂತರದಿಂದ ಸೋಲಿಸುವ ಮೂಲಕ ಸತತ ಆರನೇ ಬಾರಿಗೆ ಸಂಸತ್‌ ಪ್ರವೇಶಿಸಿದ್ದಾರೆ.  2009ರ ಚುನಾವಣೆಯಲ್ಲಿ ಅನಂತ ಕುಮಾರ್‌ ಅವರು 37,162 ಮತಗಳ ಅಂತರದಿಂದ ಜಯ ಗಳಿಸಿದ್ದರು. ಅನಂತ­ಕುಮಾರ್‌ ಅವರು 4,37,953 ಮತ ಪಡೆದಿದ್ದರು.  ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಬೈರೇಗೌಡ 4,00,341 ಮತ ಪಡೆದಿ­ದ್ದರು. 23 ವರ್ಷಗಳ ಹಿಂದೆ ಕೈತಪ್ಪಿದ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆ­ಯಲು ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿ­ಯನ್ನು ಕಣಕ್ಕೆ ಇಳಿಸಿತ್ತು. ಆದರೆ, ಈ ಸಲ 2.29 ಲಕ್ಷ ಅಂತರದಿಂದ ಸೋಲು ಕಂಡಿತು.

ನಿಲೇಕಣಿ ರಾಜಕೀಯ ಪ್ರವೇಶದ ಸುದ್ದಿಯಿಂದಾಗಿ ಚುನಾವಣೆ ಘೋಷ­ಣೆಗೂ ಎರಡು ತಿಂಗಳ ಮೊದಲೇ ಈ ಕ್ಷೇತ್ರದಲ್ಲಿ ಸಂಚಲನ ಉಂಟಾಗಿತ್ತು. ಬಹುತೇಕ ಸುಶಿಕ್ಷಿತ ಮತದಾರರೇ ಇರುವ ಕ್ಷೇತ್ರದಲ್ಲಿ ಈ ಸಲ ಜಿದ್ದಾ­ಜಿದ್ದಿನ ಪೈಪೋಟಿಯ ನಿರೀಕ್ಷೆ ವ್ಯಕ್ತವಾ­ಗಿತ್ತು. 23 ಅಭ್ಯರ್ಥಿಗಳು ಕಣದಲ್ಲಿ­ದ್ದರೂ ಈ ಇಬ್ಬರ ನಡುವೆಯೇ ನೇರ ಹಣಾ­ಹಣಿ ನಡೆದಿತ್ತು. ಜೆಡಿಎಸ್‌ ಅಭ್ಯರ್ಥಿ ರೂತ್‌ ಮನೋರಮಾ ಅವರು 3ನೇ ಸ್ಥಾನ ಪಡೆದರು. ಆಮ್ ಆದ್ಮಿ ಪಕ್ಷದ ನೀನಾ ಪಿ.ನಾಯಕ್‌  21,119 ಮತಗಳನ್ನು ಗಳಿಸಿದರು.

ನಿಲೇಕಣಿ ಅವರು ಕೆಲವೇ ಕಾರ್ಯ­ಕರ್ತರ ಜೊತೆಗೆ ಮತ ಎಣಿಕೆ ಕೇಂದ್ರಕ್ಕೆ ಎಂಟು ಗಂಟೆಗೆ ಬಂದರು. ಅನಂತ್‌ ಕುಮಾರ್‌ ಅವರು ಎಣಿಕೆ ಆರಂಭವಾ­ಗುವ ಹೊತ್ತಿಗೆ ಹಾಜರಾ­ದರು. ಮೊದಲ ಸುತ್ತಿನಿಂದಲೇ ಅನಂತ್‌ ಅವರ ಮುನ್ನಡೆ ಹಿಗ್ಗುತ್ತಲೇ ಹೋಯಿತು. ಮೊದಲ ಸುತ್ತಿನಲ್ಲಿ ಅನಂತ್‌ ಅವರು 17,000 ಮತಗಳ ಮುನ್ನಡೆ ಸಾಧಿಸಿ­ದರು. ಎರಡನೇ ಸುತ್ತಿನ  ವೇಳೆಗೆ ಮುನ್ನಡೆ 27,689 ಮತಕ್ಕೆ ಏರಿತು. ಸೋಲಿನ ಸುಳಿವು ಸಿಕ್ಕ ನಿಲೇಕಣಿ ಅವರು ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿ­ದರು. 10ನೇ ಸುತ್ತಿನ ವೇಳೆಗೆ ಅನಂತ್ ಅವರ ಮುನ್ನಡೆ ಲಕ್ಷ ದಾಟಿತ್ತು. 19ನೇ ಸುತ್ತಿನ ವೇಳೆಗೆ ಮುನ್ನಡೆ ಅಂತರ 2 ಲಕ್ಷದ ಗಡಿ ದಾಟಿತ್ತು. ಮಧ್ಯಾಹ್ನ 12.15 ರ ವೇಳೆಗೆ ಮತ ಎಣಿಕೆ ಕೇಂದ್ರಕ್ಕೆ ಬಂದ ನಿಲೇಕಣಿ ಅವರು ಅನಂತ್‌ ಅವರಿಗೆ ಶುಭ ಹಾರೈಸಿ ನಿರ್ಗಮಿಸಿದರು.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ತಲಾ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರಿದ್ದಾರೆ. ಎಲ್ಲ ಕ್ಷೇತ್ರಗ­ಳಲ್ಲೂ ಬಿಜೆಪಿ ಭಾರಿ ಮುನ್ನಡೆ ಸಾಧಿಸಿತು. ಬಸವನಗುಡಿ ಹಾಗೂ ಬೊಮ್ಮನ­ಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಅಂತರ 50,000 ಗಡಿ ದಾಟಿತ್ತು. 10 ಸುತ್ತಿನ ವರೆಗೆ ಜಯ­ನಗರ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ ಸಾಧಿಸಿತ್ತು. ಕೊನೆಗೆ ಇಲ್ಲಿ ಬಿಜೆಪಿ ಆರು ಸಾವಿರ ಮತಗಳ ಮುನ್ನಡೆ ಗಳಿಸಿತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್‌ ಕ್ಷೇತ್ರದಲ್ಲೂ ಬಿಜೆಪಿ 15,000 ಮತಗಳ ಮುನ್ನಡೆ ಸಾಧಿಸಿತು.

ಬಿಜೆಪಿ ಸೇರ್ಪಡೆಯ ತಮ್ಮ ಯತ್ನ ತಡೆದ ಅನಂತ­ಕುಮಾರ್‌ ಅವರ ಗೆಲುವಿಗೆ ಅಡ್ಡಗಾಲು ಹಾಕುವ ಏಕೈಕ ಉದ್ದೇಶದಿಂದ ಸ್ಪರ್ಧಿಸಿದ್ದ  ಶ್ರೀರಾಮ­ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಅವರು ಕೇವಲ 4,228 ಮತಗಳನ್ನು ಪಡೆದರು. ಕ್ಷೇತ್ರದಲ್ಲಿ 7,394 ಮಂದಿ ನೋಟಾ ಮತ ಚಲಾಯಿಸಿದರು.

ಕಾಣದ ಸಂಭ್ರಮ: ಮತ ಎಣಿಕೆ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಕಾರ್ಯ­ಕರ್ತರ ಅಬ್ಬರ ಕಂಡು ಬರಲಿಲ್ಲ. ಬೆಳಿಗ್ಗೆ 10 ಗಂಟೆ ವರೆಗೆ ಪಕ್ಷದ ಕಾರ್ಯಕರ್ತ­ರಿಗಿಂತ  ಕೇಂದ್ರದಲ್ಲಿ ಪೊಲೀಸರೇ ಅಧಿಕ ಸಂಖ್ಯೆಯಲ್ಲಿ ಇದ್ದರು. ಬಿಜೆಪಿ ಗೆಲುವಿನ ಸುಳಿವು ಸಿಕ್ಕ ಬಳಿಕ ಬಿಜೆಪಿ ಮುಖಂಡರು, ಕಾರ್ಯ­ಕರ್ತರು ಕೇಂದ್ರದ ಕಡೆಗೆ ಬರ­ಲಾ­ರಂಭಿಸಿದರು.

ಹೊತ್ತೇರುತ್ತಿ­ದ್ದಂತೆ ಕೇಂದ್ರ­ದಲ್ಲಿ ಕೆಲವೇ ಸಂಖ್ಯೆಯಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ನಿರ್ಗಮಿಸಿ­ದರು. ಸಂಜೆವರೆಗೂ ಕೇಂದ್ರದ ಕಡೆಗೆ ಕ್ಷೇತ್ರದ ಕಾಂಗ್ರೆಸ್‌ ಶಾಸಕರು ಸುಳಿಯ­ಲಿಲ್ಲ. ಮಧ್ಯಾಹ್ನ 2.30ಕ್ಕೆ ಫಲಿತಾಂಶವನ್ನು ಘೋಷಿಸಲಾಯಿತು.

ಶಾಸಕ­ರಾದ ಆರ್‌.ಅಶೋಕ, ಬಿ.ಎನ್‌. ವಿಜಯಕುಮಾರ್‌, ಸತೀಶ್‌ ರೆಡ್ಡಿ, ಎಲ್‌.ಎ. ರವಿಸುಬ್ರಹ್ಮಣ್ಯ, ಡಾ.ಸಿ.ಎನ್‌. ಅಶ್ವತ್ಥ­ನಾರಾಯಣ, ವಿಧಾನ ಪರಿಷತ್‌ ಸದಸ್ಯರಾದ ವಿ.ಸೋಮಣ್ಣ, ಅಶ್ವತ್ಥ­ನಾರಾಯಣ, ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ಜಗ್ಗೇಶ್‌, ಬಿಬಿಎಂಪಿ ಸದಸ್ಯರು ಸಂಭ್ರಮೋಲ್ಲಾಸದಲ್ಲಿ ಭಾಗಿಯಾದರು.

ಜನರ ವಿಜಯ
ನಗರದ ಜನರು ಬಿಜೆಪಿಗೆ ಆಶೀ­ರ್ವಾದ ಮಾಡಿದ್ದಾರೆ. ಇದು ಜನ­ತೆಗೆ ಹಾಗೂ ಒಗ್ಗಟ್ಟಿಗೆ ಸಿಕ್ಕ ಜಯ. ನಗರದಲ್ಲಿ ಸಮೂಹ ಸಾರಿಗೆ, ಹಸಿರು ಪರಿಸರ, ಕುಡಿ­ಯುವ ನೀರಿನ ವ್ಯವಸ್ಥೆಯನ್ನು ಮೇಲ್ದ­ರ್ಜೆಗೆ ಏರಿ­ಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಎಲ್ಲ ಮುಖಂಡರು ಒಟ್ಟಾಗಿ ಕೆಲಸ ಮಾಡು­ತ್ತೇವೆ. ಕಾಂಗ್ರೆಸ್‌ನ ದುರಾ­ಡಳಿತ, ಭ್ರಷ್ಟಾ­ಚಾರ, ದುರ್ಬಲ ನಾಯಕತ್ವವನ್ನು ಮತದಾರರು ತಿರಸ್ಕರಿಸಿದ್ದಾರೆ.

–ಅನಂತ ಕುಮಾರ್‌ ಬಿಜೆಪಿ ಸಂಸದ

ಜನಸೇವೆ ಮುಂದುವರಿಕೆ
ಈ ಸೋಲು ಅನಿರೀಕ್ಷಿತ. ನನಗೆ ಸಂಸದನಾಗಿ ಕೆಲಸ ಮಾಡುವ ಅವಕಾಶ ತಪ್ಪಿ ಹೋಗಿರಬಹುದು.  ಆದರೆ, ನಗರದಲ್ಲಿ ಧನಾತ್ಮಕ ಬದಲಾವಣೆ ಹುಟ್ಟು ಹಾಕಲು ಎಲ್ಲ ಪಕ್ಷಗಳ ಜನರೊಂದಿಗೆ, ಬೇರೆ ಬೇರೆ ಕ್ಷೇತ್ರಗಳಲ್ಲಿರುವ ಜನ­ರೊಂದಿಗೆ ಕೆಲಸ ಮಾಡುವ ನನ್ನ ಧ್ಯೇಯ ಮುಂದುವರಿಯಲಿದೆ. ಕಾಂಗ್ರೆಸ್‌ ಪಕ್ಷದಲ್ಲೇ ಮುಂದು­ವರಿದು ಜನಸೇವೆ ಮಾಡಲಿದ್ದೇನೆ. ನಾನು ಚುನಾವಣಾ ರಾಜಕೀಯಕ್ಕೆ ಹೊಸಬನಾದರೂ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತುಂಬ ಬೆಂಬಲ ನೀಡಿದ್ದಾರೆ. ಅವರಿಗೆ ನಾನು ಋಣಿ.
ಫಲಿತಾಂಶ ಏನೇ ಇರಲಿ, ಈ ಚುನಾವಣೆಯ ಪ್ರಚಾ­ರವು ಒಂದು ಬಲವಾದ ಸಂದೇಶ ನೀಡಿದೆ. ಜನರು ಉತ್ತಮ ಆಡಳಿತ­ಕ್ಕಾಗಿ ಎದುರು ನೋಡುತ್ತಿದ್ದಾರೆ.
–ನಂದನ್‌ ನಿಲೇಕಣಿ, ಕಾಂಗ್ರೆಸ್‌ ಅಭ್ಯರ್ಥಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT