ADVERTISEMENT

‘ರೂಪಕಗಳಿಂದ ಕಟ್ಟಿಕೊಡುವ ಬರವಣಿಗೆ’

​ಪ್ರಜಾವಾಣಿ ವಾರ್ತೆ
Published 1 ಜೂನ್ 2014, 19:54 IST
Last Updated 1 ಜೂನ್ 2014, 19:54 IST

ಬೆಂಗಳೂರು: ‘ಹಲವು ಪಠ್ಯಗಳನ್ನು ತನ್ನೊಳಗೆ ಹುದುಗಿ­ಸಿಕೊಂಡಂತೆ ಒಂದರೊಳಗೆ ಹತ್ತನ್ನು ಅರಿಯ­ಬಹು­ದಾದ ಸಮೃದ್ಧ ಬರವಣಿಗೆ ದಿವಾಕರ್‍ ಅವರದ್ದು. ರೂಪದಿಂದ ರೂಪಕ್ಕೆ ಚಲಿಸುತ್ತಾ ತಾವು ಹೇಳ­ಬೇಕಾ­ದ್ದನ್ನು ರೂಪಕಗಳಲ್ಲಿ ಕಟ್ಟಿಕೊಡುತ್ತಾರೆ’ ಎಂದು ವಿಮ­ರ್ಶಕ ಓ.ಎಲ್. ನಾಗಭೂಷಣಸ್ವಾಮಿ ವಿಶ್ಲೇಷಿಸಿದರು.

ಆಕೃತಿ ಪ್ರಕಾಶನವು ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಎಸ್.ದಿವಾಕರ್‍ ಅವರ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ‘ವಿಶ್ವದ ನೂರೆಂಟು ಸಂಗತಿಗಳನ್ನು ಒಂದೇ ಪಾಕ­ದಲ್ಲಿ ಬೆರೆಸಿ ಜನರ ತಿಳಿವಳಿಕೆಯನ್ನು ಹಿಗ್ಗಿಸುವ ಸಾಮಾ­ಜಿಕ ಕರ್ತವ್ಯವನ್ನು ಲೇಖಕ ಎಸ್.ದಿವಾಕರ್‌ ಅವರು ನಿರಂತರವಾಗಿ ಮಾಡುತ್ತಿದ್ದಾರೆ’ ಎಂದರು.

‘ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ, ಪುತಿನ ಅವರ ಅಮೂರ್ತತೆ ಮತ್ತು ಎ.ಎನ್.ಮೂರ್ತಿರಾವ್‍ ಅವರ ಲಾಲಿತ್ಯವನ್ನು ದಿವಾಕರ್‍ ಅವರ ಬರಹ­ಗಳಲ್ಲಿ ಸವಿಯಬಹುದು. ತಮ್ಮ ವಿದ್ವತ್ತನ್ನು ಬಹುಶೃತರ ಜೊತೆ ಹಂಚಿಕೊಳ್ಳುವ ಸಾಮಾಜಿಕ ಕರ್ತವ್ಯವನ್ನು ತಮ್ಮ ಕತೆ, ಪ್ರಬಂಧ ಮತ್ತು ಅನುವಾದಗಳ ಮೂಲಕ ದಿವಾಕರ್‌ ಯಶಸ್ವಿಯಾಗಿ ನಿಭಾಯಿಸಿದ್ದಾರೆ’ ಎಂದರು.

ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್‌, ‘ದಂಗು­ಬಡಿಸುವಷ್ಟು ವೈವಿಧ್ಯತೆ ದಿವಾಕರ್‍ ಅವರ ಕಥೆಗ­ಳ­ಲ್ಲಿವೆ. ಇವರ ಕಥೆಗಳಿಂದ ಹೊಮ್ಮುವ ಧ್ವನಿ ತರಂಗಗಳು ಮಾನವ ಬದುಕಿನ ಒಳನೋಟವನ್ನು ಕೊಡುವ ಚಿರಂತ­ನ­­ಗಳು. ಇವರ ಸಣ್ಣಕಥೆಗಳು ಸಂಕ್ಷಿಪ್ತತೆ­ಯಿಂದಾ­ಗಿಯೇ ವಿಶ್ವಾತ್ಮಕ ಮಾನವತಾವಾದದ ಪ್ರತಿಮೆ­ಗಳಾ­ಗಿವೆ’ ಎಂದು ಬಣ್ಣಿಸಿದರು.

ಲೇಖಕ ಎಸ್. ದಿವಾಕರ್‌, ‘ಯಾವ ಭ್ರಮೆಗಳನ್ನೂ ಇಟ್ಟುಕೊಳ್ಳಲಾಗದ ರೀತಿಯಲ್ಲಿ ನಮ್ಮ ಬದುಕುಗಳನ್ನು ರೂಪಿಸಿಕೊಂಡಿದ್ದೇವೆ. ಬೆಂಗಳೂರಿನ ಬದುಕಿಗೆ ಒಂದು ರೂಪಕವನ್ನು ಕೊಡಲು ಸಾಧ್ಯವಾಗದಷ್ಟು ಸಂಕೀರ್ಣ­ವಾಗಿದೆ. ತನ್ನ ನಿಜವಾದ ಓದುಗ ಯಾರು ಎನ್ನುವುದೂ ಗೊತ್ತಿಲ್ಲದ ಸ್ಥಿತಿ ಲೇಖಕನದ್ದಾಗಿದೆ’ ಎಂದರು.

ಸಾಹಿತಿ ಚಂದ್ರಶೇಖರ ಕಂಬಾರ, ‘ಬಹುಪಾಲು ಮಂದಿ ನಿರ್ಲಕ್ಷಿಸಿದ ವಲಯದ ಜೀವನಾನುಭವವನ್ನು ರಾಮಾನುಜನ್ ಮತ್ತು ಎಸ್. ದಿವಾಕರ್‍ ಅವರು ಅದ್ಭುತ­­ವಾಗಿ ಕಟ್ಟಿಕೊಡುತ್ತಾರೆ’ ಎಂದು ಹೇಳಿದರು. ಬಿಡುಗಡೆಯಾದ ಕೃತಿಗಳು: ರೂಪರೂಪಗಳನು ದಾಟಿ, ಹಾರಿಕೊಂಡು ಹೋದವನು, ಈ ಊರಿನಲ್ಲಿ ಕಳ್ಳರೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.