ಬೆಂಗಳೂರು: ‘ಕಲಾಸಿಪಾಳ್ಯ ಮತ್ತು ಕೆ.ಆರ್.ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ರೌಡಿಗಳ ದೌರ್ಜನ್ಯ ಮಿತಿ ಮೀರಿದ್ದು ನಮಗೆ ರಕ್ಷಣೆಯೇ ಇಲ್ಲ’ ಎಂದು ಅಖಿಲ ಕರ್ನಾಟಕ ಬೀದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ಸುಬ್ರಹ್ಮಣಿ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ದಿನ ಪೊಲೀಸರಿಗೆ, ಬಿಬಿಎಂಪಿ ಅಧಿಕಾರಿಗಳಿಗೆ ಮತ್ತು ರೌಡಿಗಳಿಗೆ ₨ 10 ರಿಂದ 20 ಮಾಮೂಲು ನೀಡಲೇಬೇಕು. ಇಲ್ಲದಿದ್ದಲ್ಲಿ ನಾವು ವ್ಯಾಪಾರ ಮಾಡುವ ಹಾಗಿಲ್ಲ. ಕಳೆದ 40–50 ವರ್ಷಗಳಿಂದ ಇಲ್ಲೇ ವ್ಯಾಪಾರ ಮಾಡುತ್ತಿದ್ದೇವೆ. ಪರವಾನಗಿ ನೀಡಿ ಶುಲ್ಕ ನಿಗದಿ ಪಡಿಸಿದರೆ ಪಾಲಿಕೆಗೆ ಶುಲ್ಕ ನೀಡಲು ನಾವು ತಯಾರಿದ್ದೇವೆ’ ಎಂದರು.
ಸಮಿತಿಯ ಸಂಚಾಲಕ ಎಂ.ಟಿ.ಸಂತೋಷ್, ‘ಕಲಾಸಿಪಾಳ್ಯದಲ್ಲಿ ಬೀದಿ ವ್ಯಾಪಾರಿಗಳು ಮುಕ್ತವಾಗಿ ಓಡಾಡಲು ಸಾಧ್ಯವಿಲ್ಲ. ಹಣ ನೀಡಲು ನಿರಾಕರಿಸುವ, ಪೊಲೀಸರಿಗೆ ದೂರು ನೀಡುವ ವ್ಯಾಪಾರಿಗಳಿಗೆ ಜೀವ ಬೆದರಿಕೆ ಹಾಕುವುದು ಅಥವಾ ಹಲ್ಲೆ ಮಾಡುವುದು ಸಾಮಾನ್ಯವಾಗಿದೆ. ಪೊಲೀಸರಿಗೆ ಇದೆಲ್ಲಾ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮುಂದೇನಾಗುವುದೋ ಎಂಬ ಭಯದಿಂದಲೇ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.