ADVERTISEMENT

12 ಹಾಸಿಗೆಗಳ ಡಯಾಲಿಸಿಸ್‌ ಘಟಕಕ್ಕೆ ಚಾಲನೆ

ಹೇರೋಹಳ್ಳಿ: ಬಿಬಿಎಂಪಿಯಿಂದ ₹7.50 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 20:31 IST
Last Updated 20 ಜನವರಿ 2024, 20:31 IST
ಹೇರೋಹಳ್ಳಿಯ ಬಿಇಎಲ್ ಬಡಾವಣೆಯಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಡಯಾಲಿಸಿಸ್ ಕೇಂದ್ರವನ್ನು ಲೋಕಾರ್ಪಣೆ ಮಾಡಿದ ನಂತರ ಡಯಾಲಿಸಿಸ್ ವಿಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿದರು. ವಿಕ್ಟೊರಿಯಾ ಆಸ್ಪತ್ರೆಯ ಯುರಾಲಜಿ ವಿಭಾಗದ ನಿರ್ದೇಶಕ ಡಾ.ಕೇಶವ ಮೂರ್ತಿ.ಆರ್, ಮುಖ್ಯಸ್ಥ ಡಾ.ಶ್ರೀಧರ್ ಇದ್ದಾರೆ.
ಹೇರೋಹಳ್ಳಿಯ ಬಿಇಎಲ್ ಬಡಾವಣೆಯಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಡಯಾಲಿಸಿಸ್ ಕೇಂದ್ರವನ್ನು ಲೋಕಾರ್ಪಣೆ ಮಾಡಿದ ನಂತರ ಡಯಾಲಿಸಿಸ್ ವಿಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿದರು. ವಿಕ್ಟೊರಿಯಾ ಆಸ್ಪತ್ರೆಯ ಯುರಾಲಜಿ ವಿಭಾಗದ ನಿರ್ದೇಶಕ ಡಾ.ಕೇಶವ ಮೂರ್ತಿ.ಆರ್, ಮುಖ್ಯಸ್ಥ ಡಾ.ಶ್ರೀಧರ್ ಇದ್ದಾರೆ.   

ರಾಜರಾಜೇಶ್ವರಿನಗರ: ಹೇರೋಹಳ್ಳಿ ವಾರ್ಡ್‍ನ ಬಿಇಎಲ್ ಬಡಾವಣೆಯಲ್ಲಿ ಬಿಬಿಎಂಪಿ ವತಿಯಿಂದ ₹ 7.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ 12 ಹಾಸಿಗೆಗಳ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.

ಈ ಘಟಕದಲ್ಲಿ ತಳ ಮಹಡಿಯಲ್ಲಿ ’ನಮ್ಮ ಕ್ಲಿನಿಕ್’, ಮೊದಲ ಮಹಡಿಯಲ್ಲಿ ಡಯಾಲಿಸಿಸ್ ಚಿಕಿತ್ಸಾ ಘಟಕ, ಎರಡನೇ ಮಹಡಿಯಲ್ಲಿ ಹೆರಿಗೆ ವಾರ್ಡ್‌ ಬರಲಿದೆ. ಬಿಬಿಎಂಪಿ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ‘ಇನ್ಸ್ಟಿಟ್ಯೂಟ್ ಆಫ್ ನೆಪ್ರೊ ಯುರಾಲಜಿ‘ ಸಹಯೋಗದೊಂದಿಗೆ ಡಯಾಲಿಸಿಸ್ ಘಟಕ ಕಾರ್ಯನಿರ್ವಹಿಸಲಿದೆ.

ಡಯಾಲಿಸಿಸ್‌ ಕೇಂದ್ರದಲ್ಲಿ ಮೂರು ಪಾಳಿಯಲ್ಲಿ ಮೂವರು ತಜ್ಞ ವೈದ್ಯರು, ಮೂವರು ಶುಶ್ರೂಷಕರು ಮತ್ತು ಏಳು ಟೆಕ್ನೀಷಿಯನ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ವೈದ್ಯರು, ಶುಶ್ರೂಕರು ಸಿಬ್ಬಂದಿ ಸೇರಿ 27 ಜನ ಕಾರ್ಯ ನಿರ್ವಹಿಸುತ್ತಾರೆ.

ADVERTISEMENT

ಮಾಗಡಿ ರಸ್ತೆಯ ತಿಪ್ಪಗೊಂಡನಹಳ್ಳಿ, ಮಂಚನಬೆಲೆ ಸಮೀಪದ ಚಿಕ್ಕನಹಳ್ಳಿ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ, ಆರ್.ಆರ್.ನಗರ, ಯಶವಂತಪುರ ಕ್ಷೇತ್ರ, ಯಲಹಂಕ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಸುತ್ತಮುತ್ತಲಿನ ನಾಗರಿಕರು ಈ ಕೇಂದ್ರದ ಪ್ರಯೋಜನ ಪಡೆಯಬಹುದು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಕ್ಟೊರಿಯಾ ಆಸ್ಪತ್ರೆಯ ಯುರಾಲಜಿ ವಿಭಾಗದ ನಿರ್ದೇಶಕ ಡಾ.ಕೇಶವ ಮೂರ್ತಿ.ಆರ್ ‘ವಿಕ್ಟೊರಿಯಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಿಪಿಎಲ್, ಆಯುಷ್ಮಾನ್ ಕಾರ್ಡ್‍ದಾರರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು’ ಎಂದರು.

ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ’ನಿರ್ದೇಶಕ ಡಾ.ಕೇಶವಮೂರ್ತಿ ಅವರೊಂದಿಗೆ ಚರ್ಚಿಸಿ, ಈ ಘಟಕಕ್ಕೆ ಯಾವ್ಯಾವ ಸೌಲಭ್ಯಗಳು ಬೇಕಾಗಿವೆ ಎಂದು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದಿಂದ ಅನುದಾನ ಕೊಡಿಸುತ್ತೇನೆ. ಯಾವುದೇ ರೀತಿಯ ಸಮಸ್ಯೆಯಾಗದಂತೆ ಮೂರು ಪಾಳಿಯಲ್ಲಿಯೂ ಚಿಕಿತ್ಸೆ ನೀಡಬೇಕು’ ಎಂದು ಸೂಚಿಸಿದರು.

ಯುರಾಲಜಿ ಮುಖ್ಯಸ್ಥ ಡಾ.ಶ್ರೀಧರ್, ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್, ಸಹಾಯಕ ಎಂಜಿನಿಯರ್ ನಟರಾಜು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.