ADVERTISEMENT

ಬೆಂಗಳೂರು: ವಿಮಾನ ನಿಲ್ದಾಣ ಮಾರ್ಗಕ್ಕೆ 2 ಸಾವಿರ ಮರ ಬಲಿ?

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 3:24 IST
Last Updated 12 ಜುಲೈ 2021, 3:24 IST

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕೆ.ಆರ್.ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ (2ಬಿ) ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಸುಮಾರು 2000 ಮರಗಳು ಬಲಿಯಾಗುವ ಸಾಧ್ಯತೆ ಇದೆ.

ಈ ಮೊದಲು 1,507 ಮರಗಳನ್ನು ಕಡಿಯುವುದಕ್ಕೆ ಅನುಮತಿ ಕೋರಿದ್ದ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಶನಿವಾರ ಹೆಚ್ಚುವರಿಯಾಗಿ 429 ಮರಗಳನ್ನು ಕಡಿಯಲು ಅನುಮತಿಗಾಗಿ ಮನವಿ ಮಾಡಿದೆ.

2ಬಿ ಮಾರ್ಗದಲ್ಲಿನ ಕಸ್ತೂರಿನಗರದಿಂದ ಕೆಂಪಾಪುರದವರೆಗೆ 1,507 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಬಿಬಿಎಂಪಿ ಅರಣ್ಯ ವಿಭಾಗಕ್ಕೆ ನಿಗಮವು ಪ್ರಸ್ತಾವ ಸಲ್ಲಿಸಿತ್ತು. ಈ ಮಾರ್ಗದಲ್ಲಿ ಎಂಟು ಮೆಟ್ರೊ ನಿಲ್ದಾಣಗಳ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ADVERTISEMENT

ಇದೇ ಮಾರ್ಗದಲ್ಲಿ ಹೆಬ್ಬಾಳದಿಂದ ಬಾಗಲೂರು ಅಡ್ಡರಸ್ತೆಯವರೆಗೆ ಮೆಟ್ರೊ ಮಾರ್ಗ ನಿರ್ಮಾಣಕ್ಕೆ 429 ಮರಗಳನ್ನು ಕಡಿಯಬೇಕಾಗಿದೆ ಎಂದು ನಿಗಮ ಹೇಳಿದೆ. ಇಲ್ಲಿ ಐದು ಮೆಟ್ರೊ ನಿಲ್ದಾಣಗಳು ತಲೆ ಎತ್ತಲಿವೆ. 2ಬಿ ಮಾರ್ಗ ನಿರ್ಮಾಣಕ್ಕೆ ಬಲಿಯಾಗುವ ಮರಗಳ ಒಟ್ಟು ಸಂಖ್ಯೆ 1,936ಕ್ಕೆ ಏರಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್. ಪುರದವರೆಗಿನ (2ಎ) ಮಾರ್ಗಕ್ಕೆ 1,859 ಮರಗಳನ್ನು ಕಡಿಯಲು ಈಗಾಗಲೇ ಬಿಎಂಆರ್‌ಸಿಎಲ್ ಅನುಮತಿ ಕೋರಿದ್ದು, ಬಿಬಿಎಂಪಿ ಅರಣ್ಯ ವಿಭಾಗ ಈಗಾಗಲೇ ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.