ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯದಲ್ಲಿ ರಸ್ತೆ ಗುಂಡಿಗಳ ಬಗ್ಗೆ ಏಪ್ರಿಲ್ನಿಂದ ಈವರೆಗೆ 1,188 ದೂರುಗಳು ಬಂದಿದ್ದು, 978 ಗುಂಡಿಗಳನ್ನು ದುರಸ್ತಿ ಮಾಡಲಾಗಿದೆ. ಇನ್ನುಳಿದ 210 ಗುಂಡಿಗಳನ್ನು ಶೀಘ್ರವೇ ಮುಚ್ಚಲಾಗುತ್ತದೆ ಎಂದು ವಲಯ ಆಯುಕ್ತೆ ವಿನೋತ್ ಪ್ರಿಯಾ ತಿಳಿಸಿದರು.
ರಸ್ತೆ ಗುಂಡಿ ದುರಸ್ತಿ ಕಾಮಗಾರಿಗಳನ್ನು ಮಂಗಳವಾರ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಸ್ತೆ ಗುಂಡಿ ಗಮನ’ ತಂತ್ರಾಂಶದಲ್ಲಿ ಏಪ್ರಿಲ್ 2024 ರಿಂದ 438 ದೂರುಗಳು ಬಂದಿದ್ದು, ಈಗಾಗಲೇ 379 ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 59 ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲಾಗುವುದು. ‘ಇಶ್ಯೂ ತಂತ್ರಾಂಶ’ದಲ್ಲಿ 750 ದೂರುಗಳ ಪೈಕಿ 599 ದೂರುಗಳನ್ನು ಬಗೆಹರಿಸಲಾಗಿದೆ. ಸಹಾಯ 2.0 ಬಂದಿರುವ ಎಲ್ಲ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ನಾಗರಿಕರಿಂದ ಬರುವ ದೂರುಗಳು ಮಾತ್ರವಲ್ಲದೆ ಎಂಜಿನಿಯರ್ಗಳು ಕೂಡ ರಸ್ತೆ ಗುಂಡಿಗಳನ್ನು ಗುರುತಿಸಿ, ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ದಕ್ಷಿಣ ವಲಯ ವ್ಯಾಪ್ತಿಯ ರಾಜಕಾಲುವೆಯಲ್ಲಿ ಹೂಳೆತ್ತುವ, ಕಟ್ಟಡ ಭಗ್ನಾವಶೇಷಗಳ ತೆರವು, ಮುರಿದಿರುವ ಸ್ಲ್ಯಾಬ್ಗಳ ತೆರವು, ಕಸ ಸುರಿಯುವ ಸ್ಥಳ, ನೀರು ನಿಲ್ಲುವ ಸ್ಥಳ, ರಸ್ತೆ ಗುಂಡಿ ಸೇರಿದಂತೆ ಇನ್ನಿತರೆ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ‘ಇಶ್ಯೂ ತಂತ್ರಾಂಶ’ ಸಿದ್ದಪಡಿಸಿಕೊಂಡಿದ್ದು, ಅದರ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು.
ಡಾಂಬರೀಕರಣ: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆ ಹಾಗೂ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟು 1,746 ಕಿ.ಮೀ ಉದ್ದದ ರಸ್ತೆಯಿದೆ. ಸಂಪೂರ್ಣ ಹಾಳಾಗಿದ್ದ 75.30 ಕಿ.ಮೀ ಉದ್ದದ ರಸ್ತೆಯಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ವಿನೋತ್ ಪ್ರಿಯಾ ತಿಳಿಸಿದರು.
ದಕ್ಷಿಣ ವಲಯದ ರಸ್ತೆಗಳ ಮಾಹಿತಿ
ವಿಧಾನಸಭಾ ಕ್ಷೇತ್ರಗಳು : 6
ವಾರ್ಡ್ಗಳು : 44 ವಾರ್ಡ್
ರಸ್ತೆಗಳ ಉದ್ದ : 1528.70 ಕಿ.ಮೀ
ಪ್ರಮುಖ ರಸ್ತೆಗಳ ಉದ್ದ : 218 ಕಿ.ಮೀ ರಸ್ತೆಗಳ
ಒಟ್ಟು ಉದ್ದ : 1746.70 ಕಿ.ಮೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.