ADVERTISEMENT

21 ಕೆ.ಜಿ ಗಾಂಜಾ: ಕುಮಾರಸ್ವಾಮಿ ಲೇಔಟ್ ಪೊಲೀಸರಿಂದ 13 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 11:21 IST
Last Updated 19 ಜುಲೈ 2021, 11:21 IST
ಜಪ್ತಿ ಮಾಡಲಾದ ಗಾಂಜಾ ಜೊತೆ ಬಂಧಿತ ರೌಡಿಗಳು
ಜಪ್ತಿ ಮಾಡಲಾದ ಗಾಂಜಾ ಜೊತೆ ಬಂಧಿತ ರೌಡಿಗಳು   

ಬೆಂಗಳೂರು: ಯಲಚೇನಹಳ್ಳಿ ಬಳಿಯ ವೈ.ವಿ.ಅಣ್ಣಯ್ಯ ರಸ್ತೆಯಲ್ಲಿರುವ ಪಾಳುಬಿದ್ದ ಕಟ್ಟಡದ ಮೇಲೆಕುಮಾರಸ್ವಾಮಿ ಲೇಔಟ್ ಪೊಲೀಸರು ದಾಳಿ ಮಾಡಿದ್ದು,21 ಕೆ.ಜಿ 350 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಅಪರಾಧ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ 13 ರೌಡಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

‘ರೌಡಿ ಮಳಿಯಾಳಿ ಮಧು ಹಾಗೂ ಆತನ ಸಹಚರರು, ಗಾಂಜಾ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಜೊತೆಗೆ, ಅಪರಾಧ ಕೃತ್ಯಕ್ಕೆ ಬೇಕಾದ ಸಿದ್ಧತೆಗಾಗಿ ಹಣ ಬಳಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ಜೋಡಿ ಕೊಲೆ ಆರೋಪಿಗಳು: ‘ಯಲಚೇನಹಳ್ಳಿಯ ಮಲಿಯಾಳಿ ಮಧು, ಕೆ.ಬಿ. ಲಿಖಿನ್, ಎಂ. ಅಯ್ಯಪ್ಪ, ಕಾರಿಯಪ್ಪ, ಸಾಗರ್, ಸುಮಂತ್, ಕಿರಣ್‌ಕುಮಾರ್, ಮುನಿಕೃಷ್ಣ, ಶಿವಕುಮಾರ್, ಜಬಿವುಲ್ಲಾ, ಪ್ರಮೋದ್, ಮಂಜುನಾಥ್ ಹಾಗೂ ಸ್ಟಾಲಿನ್ ಬಂಧಿತರು. ಇವರೆಲ್ಲ 2019ರಲ್ಲಿ ಜೆ.ಪಿ.ನಗರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಗಳು. ದಕ್ಷಿಣ ವಿಭಾಗದ ವಿವಿಧ ಠಾಣೆಗಳ ರೌಡಿ ಪಟ್ಟಿಯಲ್ಲಿ ಇವರ ಹೆಸರಿದೆ’ ಎಂದು ಡಿಸಿಪಿ ಹರೀಶ್ ಪಾಂಡೆ ಹೇಳಿದರು.

‘ಎದುರಾಳಿ ಗ್ಯಾಂಗ್ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದ್ದ ರೌಡಿಗಳು, ಅದಕ್ಕಾಗಿ ಹಣ ಹೊಂದಿಸುತ್ತಿದ್ದರು. ಬಹುಬೇಗನೇ ಹಣ ಗಳಿಸಬೇಕೆಂದು ತಿಳಿದು ಗಾಂಜಾ ಮಾರಾಟ ಮಾಡಲಾರಂಭಿಸಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.