ಬೆಂಗಳೂರು: `2020 ರ ವೇಳೆಗೆ 240 ಮಿಲಿಯನ್ ಲೀಟರ್ನಷ್ಟು ಹಾಲು ಉತ್ಪಾದಿಸುವ ಗುರಿ ಹೊಂದಲಾಗಿದೆ~ ಎಂದು ಕರ್ನಾಲ್ನ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎ.ಕೆ.ಶ್ರೀವಾಸ್ತವ ಹೇಳಿದರು.
ನಗರದ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಭಾನುವಾರ ನಡೆದ ಸಂಸ್ಥಾಪನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಮುಂದಿನ ಭವಿಷ್ಯದಲ್ಲಿ ಹಾಲಿನ ಬೇಡಿಕೆ ಹೆಚ್ಚಾಗಲಿದೆ. ಅದಕ್ಕಾಗಿ ಈಗಿನ ಉತ್ಪಾದನೆಯ ಎರಡರಷ್ಟು ಹಾಲಿನ ಉತ್ಪಾದನೆಯಾಗಬೇಕಿದೆ. ಹೆಚ್ಚಿನ ಹಾಲು ಉತ್ಪಾದನೆಗೆ ಉತ್ತಮ ತಳಿಗಳು ಮತ್ತು ಮಿಶ್ರ ತಳಿಗಳ ಹಸು ಮತ್ತು ಎಮ್ಮೆಗಳನ್ನು ದೇಶದಲ್ಲಿ ಬೆಳೆಯಲು ಅನುಕೂಲ ಕಲ್ಪಿಸಬೇಕು~ ಎಂದು ಹೇಳಿದರು.
`1950 ನೇ ಇಸವಿಯಲ್ಲಿ ಕೇವಲ 17 ಮಿಲಿಯನ್ ಟನ್ನಷ್ಟಿದ್ದ ಹಾಲು ಉತ್ಪಾದನೆ ಇಂದು 121 ಮಿಲಿಯನ್ ಟನ್ನಷ್ಟು ಅಭಿವೃದ್ಧಿ ಸಾಧಿಸಿದೆ~ ಎಂದರು.
`ನಮ್ಮ ಭವಿಷ್ಯದ ಹೈನುಗಾರಿಕೆಯನ್ನು ಉತ್ತಮಗೊಳಿಸಲು ಉತ್ತಮ ತಳಿಗಳ ಜತೆ ನಮ್ಮ ದೇಶಿಯ ತಳಿಗಳನ್ನು ಒಂದುಗೂಡಿಸಿ ಉತ್ತಮವಾದ ಹಾಲನ್ನು ಪಡೆಯಬಹುದು. ಹಾಲಿನಲ್ಲಿ ಉತ್ತಮವಾದ ಜರ್ಮ್ ಅನ್ನು ಹೊಂದಿರುವ ಹಾಲನ್ನು ಗ್ರಾಹಕರಿಗೆ ನೀಡಬೇಕಾದ ಅವಶ್ಯತೆಯಿದೆ~ ಎಂದರು.
ಬೀದರ್ನ ಕರ್ನಾಟಕ ಪಶುವೈದ್ಯ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ಎಸ್. ಹೊನ್ನಪ್ಪಗೋಳ ಮಾತನಾಡಿ, `ಪಶುವೈದ್ಯಕೀಯದಲ್ಲಿ ಹಲವು ಸ್ಥಾನಗಳು ಖಾಲಿ ಉಳಿದಿವೆ ಅವುಗಳನ್ನು ತುಂಬುವ ಸಲುವಾಗಿ ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್ನ್ನು ಹೆಬ್ಬಾಳದ ಪಶುವೈದ್ಯ ಕಾಲೇಜಿನಲ್ಲಿ ತೆರೆಯಲಾಗುವುದು~ ಎಂದರು.
`ತುಮಕೂರು ಮತ್ತು ಹಾವೇರಿಯಲ್ಲಿ ಪ್ರಾಣಿಗಳ ಅಧ್ಯಯನ ಕುರಿತಾಗಿ ಡಿಪ್ಲೊಮಾ ಕೋರ್ಸ್ನ್ನು ಆರಂಭ ಮಾಡಲಾಗುವುದು. ಗದಗ, ಅಥಣಿ ಮತ್ತು ಪುತ್ತೂರುಗಳಲ್ಲಿ ಹೊಸದಾಗಿ ಕಾಲೇಜುಗಳನ್ನು ಆರಂಭಿಸಲಾಗುವುದು~ ಎಂದು ಮಾಹಿತಿ ನೀಡಿದರು.
`ಸರ್ಕಾರ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಜಾಸ್ತಿ ಮಾಡಿರುವುದರಿಂದ ವರ್ಷಕ್ಕೆ 365 ಕೋಟಿ ರೂಪಾಯಿ ವಹಿವಾಟು ಹೆಚ್ಚಾಗಿದೆ~ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಆರ್.ಹಂಚಿನಾಳ್, ಕರ್ನಾಲ್ನ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ (ಅಕಾಡೆಮಿಕ್)ನ ಜಂಟಿ ನಿರ್ದೇಶಕ ಡಾ.ಜಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.