ಬೆಂಗಳೂರು:ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
31 ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ನೀತಿಸಂಹಿತೆ ಜಾರಿಗೊಳಿಸಲು ಮತಗಟ್ಟೆಗಳ ನಿರ್ವಹಣೆ, ಇವಿಎಂ ಮತ್ತು ವಿ.ವಿ ಪ್ಯಾಟ್ಗಳ ವ್ಯವಸ್ಥೆ, ಸಿಬ್ಬಂದಿ ನಿಯೋಜನೆ, ವಾಹನಗಳ ವ್ಯವಸ್ಥೆ, ಸೆಕ್ಟರ್ ಅಧಿಕಾರಿಗಳ ನಿರ್ವಹಣೆ, ಚುನಾವಣಾ ಖರ್ಚು ವೆಚ್ಚಗಳ ನಿರ್ವಹಣೆ, ಕಾನೂನು ಜಾರಿ ಸಂಬಂಧನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಆದಾಯ ತೆರಿಗೆ, ಅಬಕಾರಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
‘ಆದಾಯ ತೆರಿಗೆ ಇಲಾಖೆ ಜೊತೆ ಸಮನ್ವಯದಿಂದ ಕೆಲಸ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದಲೂ ತಂಡಗಳ ರಚನೆ ಮಾಡಿ ತಪಾಸಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ದೂರು ನೀಡಲು ದೂರವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಚುನಾವಣಾ ಆಯೋಗದಿಂದ ವೀಕ್ಷಕರು ತಪಾಸಣೆ ನಡೆಸಲಿದ್ದಾರೆ’ ಎಂದರು.
27 ಪ್ಲೈಯಿಂಗ್ ಸ್ಕ್ವಾಡ್
ರಾಜರಾಜೇಶ್ವರಿ ನಗರದಲ್ಲಿ 9 ವಾರ್ಡ್ಗಳಿದ್ದು, 27 ಪ್ಲೈಯಿಂಗ್ ಸ್ಕ್ವಾಡ್ಗಳನ್ನು 3 ಮೂರು ಪಾಳಿಯಲ್ಲಿ ನಿಯೋಜನೆ ಮಾಡಲಾಗುತ್ತಿದೆ. ಈ ತಂಡದಲ್ಲಿ ಪಾಲಿಕೆ, ಪೊಲೀಸ್, ಅಬಕಾರಿ ಅಧಿಕಾರಿಗಳು ಒಟ್ಟಿಗೆ ಕಾರ್ಯನಿರ್ವಹಿಸಲಿದ್ದಾರೆ. ಇದಲ್ಲದೆ 10 ಸ್ಟಾಟಿಕ್ ತಂಡ ಹಾಗೂ 10 ಚೆಕ್ಪೋಸ್ಟ್ ಸ್ಥಾಪಿಸಿ ಈಗಾಗಲೇ ಕಾರ್ಯಪ್ರೌವೃತ್ತವಾಗಿದೆ. ಅಲ್ಲದೆ 5 ವೀಡಿಯಪ ಸರ್ವಲೆನ್ಸ್ ಹಾಗೂ ವೀಡಿಯೊ ವೀಕ್ಷಣೆ ತಂಡಗಳನ್ನು ಕೂಡಾ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
688 ಮತಗಟ್ಟೆ
688 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದಕ್ಕೆ ಬೇಕಿರುವ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ ಎಂದು ಮಂಜುನಾಥ ಪ್ರಸಾದ್ ವಿವರಿಸಿದರು.
10 ಮತಗಟ್ಟೆಗಳಿಗೆ ಒಬ್ಬರಂತೆ 70 ಸೆಕ್ಟರ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ದೂರು ಬಂದರೆ 24 ಗಂಟೆಗಳ ಒಳಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.