ರಾಜರಾಜೇಶ್ವರಿ ನಗರ: ‘ಹೇರೋಹಳ್ಳಿ ವಾರ್ಡ್ನಲ್ಲಿ ₹ 48 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾವೇರಿ ನೀರು ಸರಬರಾಜು ಕಾಮಗಾರಿ ಶೇ 80ರಷ್ಟು ಮುಗಿದಿದ್ದು, ಎಲ್ಲಾ ರಸ್ತೆಗಳಿಗೆ ₹ 33 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ’ ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮಾಗಡಿ ರಸ್ತೆಯಿಂದ ಮಹದೇಶ್ವರ ನಗರ, ನಾಗರಹೊಳೆ ಸರ್ಕಲ್, ಪ್ರಸನ್ನ ಬಡಾವಣೆ ಮೂಲಕ ನೀಲಗಿರಿ ತೋಪು ತನಕ ₹ 5 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಡಾಂಬರೀಕರಣ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
‘ಗುತ್ತಿಗೆದಾರರು, ಎಂಜಿನಿಯರ್ ಗಳು ಗುಣಮಟ್ಟದ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಬೇಕು. ಸಾರ್ವಜನಿಕರು ಸಹ ಬೇಕಾಬಿಟ್ಟಿ ರಸ್ತೆ ಅಗೆಯಬಾರದು. ಚರಂಡಿ ಕಿತ್ತು ಹಾಕಬಾರದು. ಮನೆ ನಿರ್ಮಿಸುವ ಸಂದರ್ಭದಲ್ಲಿ ಮಾಲೀಕರು, ಪಾದಚಾರಿ ಮಾರ್ಗ ಮತ್ತು ರಸ್ತೆ ಅಗೆದು ಹಾಗೆಯೇ ಬಿಟ್ಟರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ’ ಎಂದರು.
ಬಿಬಿಎಂಪಿ ಸದಸ್ಯ ರಾಜಣ್ಣ, ‘ಕೆಲವು ಭಾಗಗಳಲ್ಲಿ ಹಳೆಯ ಒಳಚರಂಡಿ ಕಿತ್ತುಹೋಗಿದ್ದು, ಹೊಸದಾಗಿ ಬ್ಲಾಕ್ ಹಾಕಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.