ಬೆಂಗಳೂರು: ‘ಮಗನ ಮದುವೆಯಲ್ಲಿ ಭಾಗವಹಿಸಬೇಕಿರುವುದರಿಂದ ಶ್ರೀರಾಂಪುರ ಪೊಲೀಸ್ ಠಾಣೆಗೆ ಹಾಜರಾಗಲು ವಿನಾಯ್ತಿ ನೀಡಬೇಕು’ ಎಂದು ಹಳೆಯ ನೋಟುಗಳನ್ನು ಬದಲಾವಣೆ ಪ್ರಕರಣದ ಆರೋಪಿ ವಿ.ನಾಗರಾಜ್ ಮನವಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ.
ಈ ಕುರಿತ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಶ್ರೀರಾಂಪುರ ಠಾಣೆಗೆ ಗುರುವಾರ (ಜ.18) ಹಾಜರಾಗುವುದಕ್ಕೆ ನಾಗರಾಜ್ ಮತ್ತು ಅವರ ಇಬ್ಬರು ಮಕ್ಕಳಿಗೆ ವಿನಾಯ್ತಿ ನೀಡಿತು.
‘ನನ್ನ ಮಗ ನಾಗರಾಜ್ ಗಾಂಧಿಯ ಆರತಕ್ಷತೆ ಗುರುವಾರ (ಜ.18) ಸಂಜೆ 6.30ಕ್ಕೆ ಇದೆ. ಜ.19ರಂದು ಬೆಳಗ್ಗೆ 8.30ಕ್ಕೆ ಮುಹೂರ್ತ ಇದೆ. ಆದರೆ, ಗುರುವಾರ ಶ್ರೀರಾಂಪುರ ಠಾಣೆಗೆ ಹಾಜರಾಗಬೇಕಿದ್ದು ಜಾಮೀನು ಷರತ್ತು ಪಾಲಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಠಾಣೆಗೆ ಹಾಜರಾಗುವುದಕ್ಕೆ ವಿನಾಯ್ತಿ ನೀಡಬೇಕು’ ಎಂದು ಕೋರಿ ವಿ.ನಾಗರಾಜ್ ರಿಟ್ ಅರ್ಜಿ ಸಲ್ಲಿಸಿದ್ದರು.
‘ಠಾಣೆಗೆ ಹಾಜರಾಗುವುದಕ್ಕೆ ಶಾಶ್ವತ ವಿನಾಯ್ತಿ ನೀಡಬೇಕು’ ಎಂಬ ಕೋರಿಕೆಯ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿತು.
2016ರ ನ.8ರಂದು ಅಮಾನ್ಯಗೊಂಡಿದ್ದ ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಬದಲಿಸಿದ ಆರೋಪ ನಾಗರಾಜ್ ಮೇಲಿದೆ. ಈ ಪ್ರಕರಣದಲ್ಲಿ ನಾಗರಾಜ್ ಪುತ್ರರಾದ ಗಾಂಧಿ ಮತ್ತು ಶಾಸ್ತ್ರಿ ಕೂಡಾ ಆರೋಪಿಗಳಾಗಿದ್ದಾರೆ.
‘ಈ ಪ್ರಕರಣದಲ್ಲಿ ಮೂವರಿಗೂ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ತನಿಖೆ ಪೂರ್ಣವಾಗುವ
ರೆಗೂ ಪ್ರತಿ ಗುರುವಾರ ಶ್ರೀರಾಂಪುರ ಠಾಣೆಗೆ ಹಾಜರಾಗಬೇಕು’ ಎಂಬ ಷರತ್ತು ವಿಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.