ಬೆಂಗಳೂರು: ಈಗಿರುವ ಕನ್ನಡದ ಬಾವುಟದಲ್ಲಿ ಒಂದು ಗೆರೆ ಬದಲಾದರೂ ಸರ್ಕಾರದ ವಿರುದ್ಧ ಜನ ದಂಗೆ ಏಳುತ್ತಾರೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದರು.
ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಬಾವುಟಕ್ಕೆ ಸುಮಾರು 50 ವರ್ಷಗಳ ಇತಿಹಾಸವಿದೆ. ಪ್ರತ್ಯೇಕ ಬಾವುಟ ರಚನೆಗೆ ಸಮಿತಿ ರಚಿಸಿರುವುದರ ಹಿಂದೆ ದೊಡ್ಡ ಪಿತೂರಿ ಅಡಗಿದೆ. ಸರ್ಕಾರ ಯಾರನ್ನು ಕೇಳಿ ಸಮಿತಿ ರಚಿಸಿತು. ಕನ್ನಡ ಸಾಹಿತ್ಯ ಪರಿಷತ್ತು ಹೇಗೆ ಸಮಿತಿಯಲ್ಲಿ ಸೇರ್ಪಡೆಯಾಯಿತು. ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ಗೆ ಕನ್ನಡ ಬಾವುಟದ ಇತಿಹಾಸ ಏನು ಗೊತ್ತು’ ಎಂದು ಪ್ರಶ್ನಿಸಿದರು.
ನಗರದ ಮಾಲ್ಗಳಲ್ಲಿ ಕನ್ನಡ ಸಿನಿಮಾಗಳನ್ನೇ ಪ್ರದರ್ಶಿಸಬೇಕು. ಅಂಗಡಿಗಳ ನಾಮಫಲಕ ಕನ್ನಡದಲ್ಲೇ ಇರಬೇಕು. ಬೇರೆ ಭಾಷೆಯಲ್ಲಿದ್ದರೆ ಕಿತ್ತೆಸೆಯುತ್ತೇವೆ ಎಂದರು.
ರ್ಯಾಲಿ ಇಂದು: ‘ಗೋವಾ ಮುಖ್ಯಮಂತ್ರಿ ಹಾಗೂ ಅಲ್ಲಿನ ಜಲಸಂಪನ್ಮೂಲ ಸಚಿವ ಇಬ್ಬರೂ ಅವಿವೇಕಿಗಳು. ಆ ರಾಜ್ಯದಲ್ಲಿ ಶೇ 40ರಷ್ಟು ಕನ್ನಡಿಗ ಮತದಾರರಿದ್ದಾರೆ. ಗೋವಾ ಕರ್ನಾಟಕಕ್ಕೆ ಸೇರ್ಪಡೆಯಾಗಬೇಕು ಎಂದು ಒತ್ತಾಯಿಸಿ ಹೋರಾಟ ಮಾಡುತ್ತೇವೆ. ಈ ಸಲುವಾಗಿ ಇದೇ 20ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಬೆಳಿಗ್ಗೆ 11ಕ್ಕೆ ರ್ಯಾಲಿ ನಡೆಸಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.