ಬೆಂಗಳೂರು: ಯಲಹಂಕದ ಮೇಲ್ಸೇತುವೆ ಬಳಿ ನಿಂತಿದ್ದ ಸರಕು ಸಾಗಣೆ ವಾಹನಕ್ಕೆ ಕಾರು ಗುದ್ದಿದ್ದರಿಂದ ಚಾಲಕ ಹಾಗೂ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಮಂಡ್ಯದ ಪ್ರವೀಣ್ (30) ಹಾಗೂ ತರೀಕೆರೆಯ ನಾರಾಯಣ್ ರಾವ್ (57) ಮೃತರು.
ಶಿರಡಿಗೆ ಹೋಗುವ ಸಲುವಾಗಿ ನಾರಾಯಣ್ ರಾವ್, ಪ್ರವೀಣ್ ಅವರ ಕಾರು ಬುಕ್ ಮಾಡಿದ್ದರು. ರಾತ್ರಿ 10 ಗಂಟೆಯ ಸುಮಾರಿಗೆ ಯಲಹಂಕ ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣಕ್ಕೆ ಅವರು ಹೋಗುತ್ತಿದ್ದರು.
ವಿಮಾನ ನಿಲ್ದಾಣಕ್ಕೆ ಹೋಗಲು ತಡವಾಗಿದ್ದರಿಂದ ಪ್ರವೀಣ್, ಕಾರನ್ನು ವೇಗವಾಗಿ ಚಲಾಯಿಸಿದ್ದರು. ಮೇಲ್ಸೇತುವೆ ಸಮೀಪದ ತಿರುವಿನ ಬಳಿ ಕಾರಿನ ನಿಯಂತ್ರಣ ಕಳೆದುಕೊಂಡ ಅವರು, ರಸ್ತೆ ಪಕ್ಕದಲ್ಲಿದ್ದ ವಾಹನಕ್ಕೆ ಗುದ್ದಿಸಿದ್ದಾರೆ ಎಂದು ಯಲಹಂಕ ಸಂಚಾರ ಪೊಲೀಸರು ತಿಳಿಸಿದರು.
‘ಅಪಘಾತದ ಬಳಿಕ ಸರಕು ಸಾಗಣೆ ವಾಹನದ ಚಾಲಕ ಪರಾರಿಯಾಗಿದ್ದು, ಜಖಂಗೊಂಡ ಎರಡೂ ವಾಹನಗಳನ್ನು ಸ್ಥಳಾಂತರ ಮಾಡಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.