ADVERTISEMENT

ನೈಜೀರಿಯಾ ಪ್ರಜೆ ಸೆರೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 20:01 IST
Last Updated 10 ಫೆಬ್ರುವರಿ 2018, 20:01 IST
ಸಿಟೇಜ್
ಸಿಟೇಜ್   

ಬೆಂಗಳೂರು: ತನ್ನ ಹಣ ಕೊಡಲು ಸತಾಯಿಸುತ್ತಿದ್ದ ಕಾರಣಕ್ಕೆ ಶೈಲೇಂದ್ರ (18) ಎಂಬಾತನನ್ನು ಅಪಹರಿಸಿದ್ದ ನೈಜೀರಿಯಾ ಪ್ರಜೆ ಸಿಟೇಜ್ (34) ಕೆ.ಆರ್.ಪುರ ಪೊಲೀಸರ ಅತಿಥಿಯಾಗಿದ್ದಾನೆ.

ಯಲಹಂಕದಲ್ಲಿ ಹೋಟೆಲ್ ನಡೆಸುತ್ತಿರುವ ಸಿಟೇಜ್, ಇಬ್ಬರು ಸ್ನೇಹಿತರ ಜತೆ ಅಯ್ಯಪ್ಪನಗರದಲ್ಲಿ ನೆಲೆಸಿದ್ದಾನೆ. ಸ್ಥಳೀಯ ನಿವಾಸಿಯಾದ ಶೈಲೇಂದ್ರ, ಖಾಸಗಿ ಕಂಪನಿಯೊಂದರಲ್ಲಿ ಟೆಲಿಫೋನ್ ಆಪರೇಟರ್ ಆಗಿದ್ದಾನೆ. ಎರಡೂವರೆ ತಿಂಗಳಿಂದ ಇವರಿಬ್ಬರೂ ಸ್ನೇಹಿತರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

(ಶೈಲೇಂದ್ರ)

ADVERTISEMENT

‘ಇತ್ತೀಚೆಗೆ ಹೋಟೆಲ್ ವ್ಯವಹಾರದಲ್ಲಿ ನಷ್ಟ ಉಂಟಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ, ಸಂಬಂಧಿಕರ ಬಳಿ ಸಾಲ ಕೇಳಿದ್ದೆ. ನನ್ನ ಬ್ಯಾಂಕ್ ಖಾತೆ ಇಲ್ಲದ ಕಾರಣ, ಅವರು ಶೈಲೇಂದ್ರನ ಖಾತೆಗೆ ₹ 49 ಸಾವಿರ ಜಮೆ ಮಾಡಿದ್ದರು. ಆದರೆ, ಈತ ಆ ಹಣ ಕೊಡಲು ಸತಾಯಿಸು
ತ್ತಿದ್ದ. ಹೀಗಾಗಿ, ಸ್ನೇಹಿತರ ಜತೆ ಸೇರಿ ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಅಪಹರಿಸಿದ್ದೆ’ ಎಂದು ಸಿಟೇಜ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.

ಶೈಲೇಂದ್ರನನ್ನು ಯಲಹಂಕದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಆರೋಪಿಗಳು, ಹಣ ಕೊಡದಿದ್ದರೆ ಜೀವಂತವಾಗಿ ಬಿಡುವುದಿಲ್ಲ ಎಂದಿದ್ದರು. ಇದರಿಂದ ಬೆದರಿದ ಆತ, ಕೂಡಲೇ ಗೆಳೆಯರಿಗೆ ಕರೆ ಮಾಡಿ ಸಿಟೇಜ್‌ನ ಸ್ನೇಹಿತನ ಖಾತೆಗೆ ಆನ್‌ಲೈನ್ ಮೂಲಕ ₹ 49 ಸಾವಿರ ಹಾಕಿಸಿದ್ದ.

ರಾತ್ರಿ 11 ಗಂಟೆ ಸುಮಾರಿಗೆ ಅಪಹರಣಕಾರರ ವಶದಿಂದ ಬಿಡುಗಡೆಯಾದ ಶೈಲೇಂದ್ರ, ನಂತರ ಕೆ.ಆರ್.ಪುರ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾನೆ. ಪೊಲೀಸರು ಸಿಟೇಜ್‌ನನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಆತನ ಸ್ನೇಹಿತರಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.