ಬೆಂಗಳೂರು: ಸದ್ದುಗುಂಟೆಪಾಳ್ಯ ಎಎಸ್ಐ ಪದ್ಮಾವತಿ ಅವರ ಮನೆಯಲ್ಲಿ ₹ 1 ಲಕ್ಷ ನಗದು ಹಾಗೂ 650 ಗ್ರಾಂ ಚಿನ್ನಾಭರಣ ಕಳವಾಗಿದೆ.
ಪದ್ಮಾವತಿ ಅವರು ಮಡಿವಾಳದ ಪೊಲೀಸ್ ವಸತಿ ಸಮುಚ್ಚಯದಲ್ಲಿ ನೆಲೆಸಿದ್ದಾರೆ. ಗುರುವಾರ ಅವರು ಕರ್ತವ್ಯಕ್ಕೆ ತೆರಳಿದ್ದ ಸಮಯದಲ್ಲಿ ಈ ಕೃತ್ಯ ನಡೆದಿದೆ. ಅವರ ಪರಿಚಿತರೇ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಮನೆಯಲ್ಲಿ ನಾನು, ಅಕ್ಕನ ಮಗ ನಿಶಾಂತ್ ಹಾಗೂ 80 ವರ್ಷದ ತಾಯಿ ಮುತ್ತಮ್ಮ ನೆಲೆಸಿದ್ದೇವೆ. ಕೆಲಸದ ನಿಮಿತ್ತ ನಿಶಾಂತ್ ವಾರದ ಹಿಂದೆ ಊರಿಗೆ ಹೋಗಿದ್ದ. ಎಂದಿನಂತೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಕೆಲಸಕ್ಕೆ ಹೋದ ನಾನು, ಮಧ್ಯಾಹ್ನ 2 ಗಂಟೆಗೆ ಊಟಕ್ಕೆ ಮನೆಗೆ ಮರಳಿದೆ. ತಾಯಿ ಹುಷಾರಿಲ್ಲದೆ ಕೋಣೆಯಲ್ಲಿ ಮಲಗಿದ್ದರು. ಬೀರು ಬಾಗಿಲು ತೆರೆದಿತ್ತು. ಅದರಲ್ಲಿದ್ದ ಹಣ ಹಾಗೂ ಒಡವೆಗಳು ಕಳವಾಗಿದ್ದವು’ ಎಂದು ಪದ್ಮಾವತಿ ಆಡುಗೋಡಿ ಠಾಣೆಗೆ ದೂರು ಕೊಟ್ಟಿದ್ದಾರೆ.
‘ಬೀರುವಿನ ಕೀಯನ್ನು ಅದರ ಕೆಳಭಾಗದಲ್ಲೇ ಇಡುತ್ತಿದ್ದೆ. ಇದನ್ನು ಬಲ್ಲವರೇ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ತಾಯಿಯನ್ನು ವಿಚಾರಿಸಿದ್ದಕ್ಕೆ, ‘ಯಾರೋ ಇಬ್ಬರು ಅಪರಿಚಿತ ಯುವಕರು ನಿನ್ನನ್ನೇ ಕೇಳಿಕೊಂಡು ಬಂದಿದ್ದರು. ಹೊರಗೇ ನಿಲ್ಲಿಸಿ ಮಾತನಾಡಿಸಿದೆ. ಅವರು ಹೋದ ಬಳಿಕ ಬಾಗಿಲು ಹಾಕಿಕೊಂಡು ವಾಯುವಿಹಾರಕ್ಕೆ ಹೋಗಿ ಬಂದೆ’ ಎಂದು ಹೇಳಿದರು. ಹೀಗಾಗಿ, ಆ ಅಪರಿಚಿತರ ಮೇಲೆಯೇ ಅನುಮಾನವಿದೆ. ಕಳವಾದ ಒಡವೆಗಳ ಮೌಲ್ಯ ₹ 15 ಲಕ್ಷ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.