ADVERTISEMENT

ಬೆಂಗಳೂರು: ತೀವ್ರ ಉಸಿರಾಟ ತೊಂದರೆಯಿಂದ ಐಸಿಯು ದಾಖಲಾತಿಯಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 6:07 IST
Last Updated 3 ಜನವರಿ 2021, 6:07 IST
   

ಬೆಂಗಳೂರು: ತೀವ್ರ ಉಸಿರಾಟ ತೊಂದರೆ (ಎಸ್‌ಎಆರ್‌ಐ) ಕಾಯಿಲೆಯ ತೀವ್ರ ನಿಗಾ ಘಟಕ (ಐಸಿಯು) ದಾಖಲಾತಿಯಲ್ಲಿ ಹೆಚ್ಚಳ ಉಂಟಾಗಿರುವುದು ವೈದ್ಯಕೀಯ ವಲಯದಲ್ಲಿ ಎಚ್ಚರಕ್ಕೆ ಕಾರಣವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಾಗ ಡಿಸೆಂಬರ್ 24ರ ಬಳಿಕ ತೀವ್ರ ಉಸಿರಾಟದ ತೊಂದರೆಯಂತಹ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಐಸಿಯು ದಾಖಲಾತಿಯ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 15ರಿಂದ 20ರಷ್ಟು ವರ್ಧನೆಯಾಗಿದೆ.

ತೀವ್ರ ಉಸಿರಾಟ ತೊಂದರೆಯ ಕಾಯಿಲೆ ಹೆಚ್ಚಳಕ್ಕೆ ಕೋವಿಡ್-19 ಸಂಬಂಧವನ್ನು ಹೊಂದಿಲ್ಲ ಎಂಬುದನ್ನು ವೈದ್ಯರು ವಿವರಿಸುತ್ತಾರೆ. ಆದರೂ ಕೋವಿಡ್-19 ಪೀಡಿತ ಅನೇಕ ಜನರು ಕಾಯಿಲೆ ಗಂಭೀರ ಹಂತದ ವರೆಗೂ ತಲುಪುವ ವರೆಗೂ ಆರೋಗ್ಯ ತಪಾಸಣೆ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಚಳಿಗಾಲದಲ್ಲಿ ತೀವ್ರ ಉಸಿರಾಟದ ತೊಂದರೆ ಇರುವವರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಮಣಿಪಾಲ್ಹಾಸ್ಪಿಟಲ್ಸ್ ತೀವ್ರ ನಿಗಾ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸುನಿಲ್ ಕಾರಂತ್ ತಿಳಿಸಿದರು. ತೀವ್ರ ಉಸಿರಾಟದ ತೊಂದರೆಗಾಗಿ ಮೀಸಲಿರಿಸಿದ್ದ ಎಲ್ಲ 20 ಬೆಡ್‌ಗಳು ಭರ್ತಿಯಾಗಿದೆ. ಕಳೆದ ವರ್ಷ ಹೀಗಾಗಿರಲಿಲ್ಲ ಎಂದವರು ವಿವರಿಸಿದರು.

ಹಾಗಿದ್ದರೂ ಕಳೆದ ಚಳಿಗಾಲಕ್ಕೆ ಹೋಲಿಸಿದಾಗ ಕ್ರೋನಿಕ್ ಅಬ್ಸ್‌ಟ್ರಕ್ಟರಿ ಪಲ್ಮನರಿ ಕಾಯಿಲೆ (ಸಿಒಪಿಡಿ) ಹೊಂದಿರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕರ್ನಾಟಕ ಪಲ್ಮನೊಲಾಜಿಸ್ಟ್ಸಂಸ್ಥೆಯ ಅಧ್ಯಕ್ಷ ಡಾ. ಕೆ.ಎಸ್. ಸತೀಶ್ ಹೇಳಿದರು. ಬೇಸ್‌ಲೈನ್‌ಗಿಂತ ಯಾವುದೇ ಏರಿಕೆ ಕಂಡುಬಂದಿಲ್ಲ. ಜನರು ಮಾಸ್ಕ್ ಧರಿಸುವ ಪ್ರವೃತ್ತಿ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

ಎಸ್‌ಎಆರ್‌ಐ ತೊಂದರೆ ಅನುಭವಿಸುತ್ತಿರುವವರನ್ನು ಆಸ್ಪತ್ರೆಗೆ ಸೇರಿಸಲು ವಿಳಂಬ ಮಾಡುತ್ತಿರುವುದರಿಂದಾಗಿ ಪ್ರಕರಣಗಳ ಏರಿಕೆಯು ತೀವ್ರವಾಗಿದೆ. ಆರೋಗ್ಯ ತಪಾಸಣೆಗೆ ಒಳಗಾಗುವುದರ ಬಗ್ಗೆ ಜನರಲ್ಲಿ ಆತಂಕವಿದೆ. ಉಸಿರಾಟದ ಕಾಯಿಲೆಯೊಂದಿಗೆ ಆಸ್ಪತ್ರೆಗೆ ಬಂದರೆ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತದೆ ಎಂಬುದು ಅವರಿಗೆ ತಿಳಿದಿದೆ. ಅದನ್ನವರು ಬಯಸುವುದಿಲ್ಲ ಎಂದು ಏಸ್ ಸುಹಾಸ್ ಆಸ್ಪತ್ರೆಯ ಡಾ. ಜಗದೀಶ್ ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.