ADVERTISEMENT

40 ಪರ್ಸೆಂಟ್‌ ಕಮಿಷನ್‌ ಮೇಲ್ಸೇತುವೆ: ಎಎಪಿಯಿಂದ ನಾಮಫಲಕ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 13:22 IST
Last Updated 29 ಆಗಸ್ಟ್ 2022, 13:22 IST
ನಗರದ ಶಿವಾನಂದ ಬ್ರಿಡ್ಜ್‌ ಬಳಿ ‘ಶೇ 40 ಕಮಿಷನ್‌ ಮೇಲ್ಸೇತುವೆ’ ಎಂಬ ನಾಮಫಲಕ ಅಳವಡಿಸಿದ್ದ ಎಎಪಿ
ನಗರದ ಶಿವಾನಂದ ಬ್ರಿಡ್ಜ್‌ ಬಳಿ ‘ಶೇ 40 ಕಮಿಷನ್‌ ಮೇಲ್ಸೇತುವೆ’ ಎಂಬ ನಾಮಫಲಕ ಅಳವಡಿಸಿದ್ದ ಎಎಪಿ   

ಬೆಂಗಳೂರು: ನಗರದ ಶಿವಾನಂದ ಮೇಲ್ಸೇತುವೆಯ ಬಳಿ (ಸ್ಟೀಲ್‌ ಬ್ರಿಡ್ಜ್‌) ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ‘ಶೇ 40 ಕಮಿಷನ್‌ ಮೇಲ್ಸೇತುವೆ’ ಎಂಬ ನಾಮಫಲಕ ಅಳವಡಿಸಿ, ಸೋಮವಾರ ವಿನೂತನ ಪ್ರತಿಭಟನೆ ನಡೆಸಿದರು.

ಫಲಕ ತೆರವು ಮಾಡುವಂತೆ ಪೊಲೀಸರು ಸೂಚನೆ ನೀಡಿದರೂ ಪ್ರತಿಭಟನೆ ಮುಂದುವರಿಸಿದಾಗ ಪೊಲೀಸರು– ಎಎಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬಳಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು. ಈ ವೇಳೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

‘ಆರಂಭದಲ್ಲಿ ಸ್ಟೀಲ್‌ ಬ್ರಿಡ್ಜ್‌ಗೆ ₹ 19 ಕೋಟಿ ಅನುದಾನ ನಿಗದಿ ಪಡಿಸಲಾಗಿತ್ತು. ಕಾಮಗಾರಿ ನಿಧಾನಗತಿಯಲ್ಲಿ ನಡೆದು ಅನುದಾನವು ₹ 39 ಕೋಟಿಗೆ ಏರಿಕೆಯಾಗಿದೆ. ಆದರೂ, ಕಾಮಗಾರಿ ಕಳಪೆಯಾಗಿದೆ. ರಾಜ್ಯ ಸರ್ಕಾರವು ಜನರ ಹಣವನ್ನು ಲೂಟಿ ಮಾಡಿದೆ’ ಎಂದು ನಗರ ಅಧ್ಯಕ್ಷರಾದ ಮೋಹನ್ ದಾಸರಿ ದೂರಿದರು.

‘ಶೇ 40 ಕಮಿಷನ್‌ನಲ್ಲಿ ಮುಳುಗಿರುವ ಬಿಜೆಪಿಗೆ ಮುಂದೆ ತಕ್ಕಪಾಠ ಕಲಿಸಲಾಗುವುದು. ನಗರದಲ್ಲಿ ಇದೇ ರೀತಿ ಅನೇಕ ಕಾಮಗಾರಿಗಳಿಗೆ 3ರಿಂದ 4 ಪಟ್ಟು ಅನುದಾನ ಹೆಚ್ಚಿಸಲು ಸಮಯ ವ್ಯರ್ಥ ಮಾಡಲಾಗಿದೆ. ಎಲ್ಲ ಪ್ರಕರಣಗಳ ಸಮಗ್ರ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ವಿಜಯ್ ಶರ್ಮಾ, ಮುಖಂಡರಾದ ಜಗದೀಶ್ ವಿ. ಸದಂ, ಸುರೇಶ್ ರಾಥೋಡ್, ಚನ್ನಪ್ಪಗೌಡ ನಲ್ಲೂರು, ಶಾಶಾವಲಿ, ಉಷಾ ಮೋಹನ್, ಸುಹಾಸಿನಿ ಪಣಿರಾಜ್, ಗೋಪಿನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.