ADVERTISEMENT

ಹಣದಾಸೆಗೆ ಗರ್ಭಪಾತ: ಗರ್ಭಚೀಲ, ಕರುಳಿಗೆ ಹಾನಿ

ಬಾಗಲಗುಂಟೆ ಠಾಣೆಯಲ್ಲಿ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 20:11 IST
Last Updated 25 ಜೂನ್ 2022, 20:11 IST
   

ಬೆಂಗಳೂರು: ಹಣದಾಸೆಗಾಗಿ ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಲು ಹೋಗಿ ಗರ್ಭಚೀಲ ಹಾಗೂ ಕರುಳಿಗೆ ಹಾನಿ ಉಂಟು ಮಾಡಿದ ಆರೋಪದಡಿ ಮಲ್ಲಸಂದ್ರದ ಸರ್ಕಾರಿ ಆಸ್ಪತ್ರೆ ಶುಶ್ರೂ ಷಕಿ ಗಂಗಲಕ್ಷ್ಮಿ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅವೈಜ್ಞಾನಿಕ ಗರ್ಭಪಾತದಿಂದ ಅಸ್ವಸ್ಥಗೊಂಡಿರುವ 27 ವರ್ಷದ ಮಹಿಳೆ, ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಗಂಗಲಕ್ಷ್ಮಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು,ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಇಬ್ಬರು ಮಕ್ಕಳ ತಾಯಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ನಿವಾಸಿಯಾದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಮೂರನೇ ಬಾರಿ ಅವರು ಗರ್ಭ ಧರಿಸಿದ್ದರು. ಬೆಂಗಳೂರಿನಲ್ಲಿರುವ ಅಣ್ಣನ ಮನೆಗೆ ಇತ್ತೀಚೆಗೆ ಬಂದಿದ್ದ ಅವರು, ‘ಎರಡು ಮಕ್ಕಳು ಸಾಕು. ಮೂರನೇ ಮಗು ಬೇಡ’ ಎಂಬುದಾಗಿ ಹೇಳಿ ಗರ್ಭಪಾತ ಮಾಡಿಸಲು ತೀರ್ಮಾನಿಸಿದ್ದರು. ಅಣ್ಣ ಹಾಗೂ ಅತ್ತಿಗೆ ಜೊತೆ ಜೂನ್ 11ರಂದು ಮಲ್ಲಸಂದ್ರದ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದ ಮಹಿಳೆಗೆ ಶುಶ್ರೂಷಕಿ ಗಂಗಲಕ್ಷ್ಮಿ ಭೇಟಿಯಾಗಿದ್ದರು. ತಾವೇ ಗರ್ಭಪಾತ ಮಾಡುವುದಾಗಿ ಹೇಳಿದ್ದ ಗಂಗಲಕ್ಷ್ಮಿ, ಅದಕ್ಕಾಗಿ ₹ 4,500 ಕೇಳಿದ್ದರು. ಅಷ್ಟು ಹಣವಿಲ್ಲವೆಂದಿದ್ದ ಮಹಿಳೆ, ₹ 3,000 ನೀಡಲು ಒಪ್ಪಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಜೂನ್ 12ರಂದು ಪುನಃ ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ಗಂಗಲಕ್ಷ್ಮಿ ಅವರು ಆಸ್ಪತ್ರೆಯ ಕೊಠಡಿಗೆ ಕರೆದೊಯ್ದಿದ್ದರು. ಅವೈಜ್ಞಾನಿಕವಾಗಿ ಶಸ್ತ್ರಚಿಕಿತ್ಸೆ ನಡೆಸಿ, ಗುಪ್ತಾಂಗದ ಒಳಗೆ ಹಾನಿ ಮಾಡಿದ್ದರು. ಇದರಿಂದ ತೀವ್ರ ರಕ್ತಸ್ರಾವವಾಗಿತ್ತು. ವಿಪರೀತ ರಕ್ತ ಸೋರುತ್ತಿದ್ದರಿಂದ ಗಾಬರಿಗೊಂಡ ಗಂಗಲಕ್ಷ್ಮಿ, ‘ಗರ್ಭಪಾತ ಆಗುತ್ತಿಲ್ಲ. ಕೂಡಲೇ ವಾಣಿ ವಿಲಾಸ್ ಆಸ್ಪತ್ರೆಗೆ ಕರೆದೊಯ್ಯಿರಿ. ಆಸ್ಪತ್ರೆಯಲ್ಲಿ ಗರ್ಭಪಾತಕ್ಕೆ ಯತ್ನಿಸಿದ ವಿಷಯವನ್ನು ಯಾರಿಗೂ ಹೇಳಬೇಡಿ’ ಎಂದಿದ್ದರು. ಆಂಬುಲೆನ್ಸ್‌ನಲ್ಲಿ ಮಹಿಳೆಯನ್ನು ತಾವೇ ಕಳುಹಿಸಿಕೊಟ್ಟಿದ್ದರು. ವಾಣಿ ವಿಲಾಸ್ ಆಸ್ಪತ್ರೆ ವೈದ್ಯರು, ತಪಾಸಣೆ ನಡೆಸಿದಾಗಲೇ ವಿಷಯ ಗೊತ್ತಾಗಿತ್ತು. ಅವರೇ ಠಾಣೆಗೆ ಕರೆ ಮಾಡಿ ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆಸಿಕೊಂಡಿದ್ದರು’ ಎಂದೂ ತಿಳಿಸಿವೆ.

ಐಎಂಎಗೆ ಪೊಲೀಸರ ಪತ್ರ

ನಿರ್ಲಕ್ಷ್ಯದಿಂದ ಗಂಭೀರವಾಗಿ ಗಾಯಗೊಳಿಸಿದ (ಐಪಿಸಿ 338) ಆರೋಪದಡಿ ಗಂಗಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು, ಪ್ರಕರಣದ ಬಗ್ಗೆ ವೈಜ್ಞಾನಿಕ ವರದಿ ನೀಡುವಂತೆ ಭಾರತೀಯ ವೈದ್ಯಕೀಯ ಸಂಘಕ್ಕೆ (ಐಎಂಎ) ಪತ್ರ ಬರೆದಿದ್ದಾರೆ.

‘ಶುಶ್ರೂಷಕಿ ಮೇಲಿನ ಆರೋಪದ ಬಗ್ಗೆ ಐಎಂಎ ಕಡೆಯಿಂದ ವರದಿ ಪಡೆಯಲಿದ್ದೇವೆ. ನಂತರ, ವಿಚಾರಣೆ ನಡೆಸಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಐಎಂಎಗೆ ಪೊಲೀಸರ ಪತ್ರ

ನಿರ್ಲಕ್ಷ್ಯದಿಂದ ಗಂಭೀರವಾಗಿ ಗಾಯಗೊಳಿಸಿದ (ಐಪಿಸಿ 338) ಆರೋಪದಡಿ ಗಂಗಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು, ಪ್ರಕರಣದ ಬಗ್ಗೆ ವೈಜ್ಞಾನಿಕ ವರದಿ ನೀಡುವಂತೆ ಭಾರತೀಯ ವೈದ್ಯಕೀಯ ಸಂಘಕ್ಕೆ (ಐಎಂಎ) ಪತ್ರ ಬರೆದಿದ್ದಾರೆ. ‘ಶುಶ್ರೂಷಕಿ ಮೇಲಿನ ಆರೋಪದ ಬಗ್ಗೆ ಐಎಂಎ ಕಡೆಯಿಂದ ವರದಿ ಪಡೆಯಲಿದ್ದೇವೆ. ನಂತರ, ವಿಚಾರಣೆ ನಡೆಸಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.