ಬೆಂಗಳೂರು: ತುಮಕೂರು ರಸ್ತೆಯ ಎಂಟನೇ ಮೈಲಿ ಸಿಗ್ನಲ್ನಲ್ಲಿ ಆಟೊ ಹಾಗೂ ಕ್ಯಾಂಟರ್ ನಡುವೆ ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದ್ದು, ಆಟೊ ಚಾಲಕಪುಂಡಲೀಕ ಹರ್ಷ ಅಲಿಯಾಸ್ ಪ್ರಕಾಶ್ (35) ಮೃತಪಟ್ಟಿದ್ದಾರೆ.
ಮೃತ ಪ್ರಕಾಶ್, ತಿಗಳರಪಾಳ್ಯದ ನಿವಾಸಿ. ಅಪಘಾತದಲ್ಲಿ ಹಾವೇರಿಯ ಸಾಬಣ್ಣ, ಶರಣಪ್ಪ, ಹುಲಿಯಮ್ಮ ಹಾಗೂ ಅಂಬರೀಷ್ ಎಂಬುವರು ಗಾಯಗೊಂಡಿದ್ದಾರೆ. ‘ನೆಲಗೆದರನಹಳ್ಳಿಯಲ್ಲಿ ವಾಸವಿದ್ದ ಶರಣಪ್ಪ ಅವರಿಗೆ ಶುಕ್ರವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಆಗ ಸಂಬಂಧಿಕರು, ಶರಣಪ್ಪರನ್ನು ಪ್ರಕಾಶ್ ಅವರ ಆಟೊದಲ್ಲಿ ಹೆಸರುಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ರಾತ್ರಿ 11.15 ಗಂಟೆ ಸುಮಾರಿಗೆ ಎಂಟನೇ ಮೈಲಿ ಸಿಗ್ನಲ್ನಲ್ಲಿ ಬಲ ತಿರುವು ತೆಗೆದುಕೊಳ್ಳುವಾಗ ಆಟೊಗೆ ಕ್ಯಾಂಟರ್ ಡಿಕ್ಕಿ ಹೊಡೆದಿತ್ತು’ ಎಂದು ಪೀಣ್ಯ ಪೊಲೀಸರು ಹೇಳಿದರು.
ತೀವ್ರ ಗಾಯಗೊಂಡಿದ್ದ ಪ್ರಕಾಶ್, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟರು.
ಚಾಲಕ ಪರಾರಿ: ‘ಅಪಘಾತಕ್ಕೆ ಕ್ಯಾಂಟರ್ ಚಾಲಕನ ನಿರ್ಲಕ್ಷ್ಯವೇ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸ್ಥಳದಲ್ಲೇ ಕ್ಯಾಂಟರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.