ADVERTISEMENT

ಪ್ರತ್ಯೇಕ ಅಪಘಾತ; ವಿದ್ಯಾರ್ಥಿ ಸೇರಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 19:42 IST
Last Updated 20 ಡಿಸೆಂಬರ್ 2020, 19:42 IST

ಬೆಂಗಳೂರು: ನಗರದ ಬಸವನಗುಡಿ ಹಾಗೂ ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಜಯನಗರ ನಿವಾಸಿ ಧೀರಜ್ (20) ಹಾಗೂ ತರಹುಣಸೆ ಗ್ರಾಮದ ಕೃಷ್ಣಪ್ಪ (57) ಮೃತರು.

‘ಖಾಸಗಿ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿರುವ ಧೀರಜ್, ಶನಿವಾರ ತಡರಾತ್ರಿ 12.30ರ ಸುಮಾರಿಗೆ ಸ್ನೇಹಿತರಾದ ಮಹದೇವಸ್ವಾಮಿ ಮತ್ತು ಪುನೀತ್ ಜತೆ ಒಂದೇ ಬೈಕ್‌ನಲ್ಲಿ ಕನಕಪುರ ರಸ್ತೆ ಕಡೆ ಹೋಗುತ್ತಿದ್ದರು. ಯಡಿಯೂರು ವೃತ್ತದ ಬಳಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡ ಧೀರಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಬಸವನಗುಡಿ ಸಂಚಾರ ಪೊಲೀಸರು ಹೇಳಿದರು.

ADVERTISEMENT

‘ಅಪಘಾತದಿಂದಾಗಿ ಮಹದೇವಸ್ವಾಮಿ ಮತ್ತು ಪುನೀತ್ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್‌ನಲ್ಲಿ ಹೊರಟಿದ್ದ ವೇಳೆ ಮೂವರೂ ಹೆಲ್ಮೆಟ್ ಧರಿಸಿರಲಿಲ್ಲ’ ಎಂದೂ ತಿಳಿಸಿದರು.

ಟಿಪ್ಪರ್‌ಗೆ ಗುದ್ದಿದ ಬೈಕ್; ‘ತರಹುಣಸೆ ಗ್ರಾಮದ ಕೃಷ್ಣಪ್ಪ, ಹುಣಸಮಾರನಹಳ್ಳಿಯ ಸರ್ವೀಸ್ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ 5.30ರ ಸುಮಾರಿಗೆ ಬೈಕ್‌ನಲ್ಲಿ ಹೊರಟಿದ್ದರು. ಟಿಪ್ಪರ್ ವಾಹನಕ್ಕೆ ಬೈಕ್‌ ಗುದ್ದಿತ್ತು. ತೀವ್ರ ಗಾಯಗೊಂಡ ಕೃಷ್ಣಪ್ಪ, ಸ್ಥಳದಲ್ಲೇ ಮೃತಪಟ್ಟರು’ ಎಂದು ಚಿಕ್ಕಜಾಲ ಸಂಚಾರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.