
ಅಪಘಾತ
-ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಟೆಕಿ ಮೃತಪಟ್ಟಿದ್ದಾರೆ.
ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ವೊಂದು ರಿಯಲ್ ಎಸ್ಟೇಟ್ ಏಜೆಂಟ್ ಆಸಿಫ್ (55) ಅವರಿಗೆ ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
‘ಮಂಗಳವಾರ ರಾತ್ರಿ 8.30ರ ಸುಮಾರಿಗೆ ಬೆಂಗಳೂರು–ಬಳ್ಳಾರಿ ರಸ್ತೆಯ ಕಾಡೇನಹಳ್ಳಿ ಗೇಟ್ ಬಳಿ ಆಸೀಫ್ ಅವರು ರಸ್ತೆ ದಾಟುತ್ತಿದ್ದರು. ಅದೇ ಸಮಯದಲ್ಲಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಕೆ.ಜಿ ಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಂಕ್ಚರ್ ಆಗಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಸೈಕಲ್ನಲ್ಲಿ ಬಂದ ಟೆಕಿಯೊಬ್ಬರು ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಎಚ್ಬಿಆರ್ ಲೇಔಟ್ನ ರಾಮಕೃಷ್ಣನ್ (51) ಮೃತಪಟ್ಟವರು.
‘ಸಿಗ್ನಲ್ ಲೈಟ್ ಹಾಕಿರಲಿಲ್ಲ’:
‘ಕೆಟ್ಟುಹೋಗಿದ್ದ ಕ್ಯಾಂಟರ್ ಅನ್ನು ಹೆಣ್ಣೂರು – ನಾಗವಾರ ರಸ್ತೆಬದಿಯಲ್ಲಿ ನಿಲುಗಡೆ ಮಾಡಲಾಗಿತ್ತು. ಚಾಲಕ ವಾಹನದಲ್ಲಿದ್ದ ಯಾವುದೇ ಸಿಗ್ನಲ್ ಲೈಟ್ ಹಾಕಿರಲಿಲ್ಲ. ಅದೇ ಮಾರ್ಗದಲ್ಲಿ ಬುಧವಾರ ಮುಂಜಾನೆ ತಮ್ಮ ಸ್ಪೋರ್ಟ್ಸ್ ಸೈಕಲ್ನಲ್ಲಿ ತೆರಳುತ್ತಿದ್ದ ರಾಮಕೃಷ್ಣನ್ ಅವರು ನಿಂತಿದ್ದ ವಾಹನಕ್ಕೆ ಡಿಕ್ಕಿಯಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಅವರು ಮೃತಪಟ್ಟಿದ್ದಾರೆ’ ಎಂದು ಕೆ.ಜಿ ಹಳ್ಳಿ ಪೊಲೀಸರು ತಿಳಿಸಿದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.