ADVERTISEMENT

ಬೈಕ್‌ಗೆ ಮಿನಿ ಬಸ್ ಡಿಕ್ಕಿ: ಉದ್ಯೋಗಿ ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 19:47 IST
Last Updated 10 ಅಕ್ಟೋಬರ್ 2022, 19:47 IST

ಬೆಂಗಳೂರು: ಉಲ್ಲಾಳ ಮುಖ್ಯರಸ್ತೆಯಲ್ಲಿ ಬೈಕ್ ಹಾಗೂ ಮಿನಿ ಬಸ್ ನಡುವೆ ಭಾನುವಾರ ಅಪಘಾತ ಸಂಭವಿಸಿದ್ದು, ಶ್ರೇಯಸ್ (26) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಉಲ್ಲಾಳ ನಿವಾಸಿ ಶ್ರೇಯಸ್, ಖಾಸಗಿ ಕಂಪನಿಯೊಂದರ ಉದ್ಯೋಗಿ. ಕೆಲಸ ನಿಮಿತ್ತ ಬೈಕ್‌ನಲ್ಲಿ ಹೊರಟಿದ್ದರು. ಅದೇ ಸಂದರ್ಭದಲ್ಲೇ ಮಿನಿ ಬಸ್‌, ಬೈಕ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದರು.

‘ತಲೆಗೆ ತೀವ್ರ ಪೆಟ್ಟು ಬಿದ್ದು ಶ್ರೇಯಸ್ ಮೃತಪಟ್ಟಿದ್ದಾರೆ. ಮಿನಿ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಭೀಮಾನದಿಯಲ್ಲಿ ಕೊಚ್ಚಿಹೋದ ಬೆಂಗಳೂರು ವ್ಯಕ್ತಿ

ಕಲಬುರಗಿ: ಅಫಜಲಪುರ ತಾಲ್ಲೂಕಿನ ಘತ್ತರಗಿಯ ಭಾಗ್ಯವಂತಿದೇವಿ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ ಜೆ.ಪಿ.ನಗರದ ನಿವಾಸಿ ಸುರೇಶ್ (40) ಎಂಬುವರು ಭೀಮಾ ನದಿಯಲ್ಲಿ ಸ್ನಾನ ಮಾಡುವಾಗ, ನೀರಿನಲ್ಲಿ ಸೋಮವಾರ ಕೊಚ್ಚಿಕೊಂಡು ಹೋಗಿದ್ದಾರೆ.

ಸಂಜೆಯವರೆಗೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿಲ್ಲ.

‘ಪತ್ನಿ ಪದ್ಮಪ್ರಿಯಾ ಮತ್ತು ಪುತ್ರಿ ನೇಹಾ ಜೊತೆ ಸುರೇಶ್ ಘತ್ತರಗಿಗೆ ಬಂದಿದ್ದರು. ಪತ್ನಿ ಮತ್ತು ಪುತ್ರಿ ಇಬ್ಬರೂ ನದಿ ದಡದ ಕಲ್ಲಿನ ಕಟ್ಟೆ ಮೇಲೆ ಕೂತ ವೇಳೆ ದುರ್ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ, ಪತ್ತೆ ಕಾರ್ಯಾಚರಣೆ ಸವಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.