ಬೆಂಗಳೂರು: ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಾಲೀಕನ ಮನೆಯಲ್ಲಿ ₹1.51 ಕೋಟಿ ನಗದು ಕಳ್ಳತನ ಮಾಡಿ ಪರಾರಿ ಆಗಿದ್ದ ಆರೋಪಿಯನ್ನು ವೈಯಾಲಿಕಾವಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗುಂಟೂರಿನ ರಾಜೇಶ್(45) ಬಂಧಿತ ಆರೋಪಿ. ಆಂಧ್ರಪ್ರದೇಶದ ಆರೋಪಿ ವೈಯಾಲಿಕಾವಲ್ ಟಿಡಿಟಿ ದೇವಸ್ಥಾನದ ಬಳಿಯ ಮನೆಯಲ್ಲಿ ನೆಲಸಿದ್ದ.
ಆರೋಪಿಯಿಂದ ನಗದು ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಕೋದಂಡರಾಯಪುರದಲ್ಲಿ ಲೆಕ್ಕಪರಿಶೋಧನಾ ಕಚೇರಿ ಹೊಂದಿರುವ ತೋಟದ ಪ್ರಸಾದ್ ಅವರ ಬಳಿ ಆರೋಪಿ ರಾಜೇಶ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಗ್ರಾಹಕರ ತೆರಿಗೆ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವ ಉದ್ದೇಶದಿಂದ ಕಾರಿನಲ್ಲಿ ಇಡುವಂತೆ ಕಾರು ಚಾಲಕನಿಗೆ ತೋಟದ ಪ್ರಸಾದ್ ಅವರು ಹೇಳಿದ್ದರು. ಆದರೆ, ಆರೋಪಿ ಕಾರಿನಲ್ಲಿ ಇಡದೇ ಬೈಕ್ನಲ್ಲಿ ಹಣ ಇಟ್ಟುಕೊಂಡು ಪರಾರಿಯಾಗಿದ್ದ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.
‘ಕಳವು ಮಾಡಿದ್ದ ಹಣವನ್ನು ಆರೋಪಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ. ಮನೆಯಲ್ಲಿ ಶೋಧ ನಡೆಸಿದಾಗ ಹಣ ಪತ್ತೆ ಆಯಿತು’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.