ಹೆಸರಘಟ್ಟ: ಕಾಕೋಳು ಗ್ರಾಮದಲ್ಲಿ ದೊಡ್ಡಬಳ್ಳಾಪುರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಾಧನಾ ಸಮಾವೇಶ ಸೋಮವಾರ ನಡೆಯಿತು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸದಸ್ಯೆ ಜಿ.ಎಚ್.ಕೋಕಿಲಾ ಮಾತನಾಡಿ, ‘ಸ್ತ್ರೀಶಕ್ತಿ ಗುಂಪುಗಳು ಕೇವಲ ಸಾಲ ತೆಗೆದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಬಾರದು. ಬದಲಿಗೆ ನಮ್ಮ ಜ್ಞಾನವನ್ನು ಬೆಳೆಸಿಕೊಂಡು ಸಂಸಾರವನ್ನು ಕಟ್ಟಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ಮಹಿಳೆಯು ಸ್ವಾವಲಂಬನೆಯತ್ತ ದೃಢ ಹೆಜ್ಜೆ ಹಾಕಬೇಕು’ ಎಂದರು.
ಸಂಸ್ಥೆಯ ಮೇಲ್ವಿಚಾರಕಿ ಭಾಗ್ಯಮ್ಮ ಅವರು, ‘ಸ್ತ್ರೀಶಕ್ತಿ ಗುಂಪುಗಳು ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅನೇಕ ಲೇಖಕಿಯರು ಬದುಕಿಗೆ ಬೇಕಾದ ಸಂಸ್ಕಾರವನ್ನು ತಮ್ಮ ಸಾಹಿತ್ಯದಲ್ಲಿ ನೀಡಿದ್ದಾರೆ. ಅಂತಹ ಪುಸ್ತಕಗಳ ಓದು ನಮ್ಮ ಬದುಕಿಗೆ ಬೆಳಕಾಗುತ್ತದೆ’ ಎಂದರು.
‘ಕಾಕೋಳು ಗ್ರಾಮದಲ್ಲಿ ಸರೋಜಮ್ಮ ಎನ್ನುವ ಲೇಖಕಿ ಅನೇಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಕಾದಂಬರಿ ಆಧರಿಸಿ ಅನೇಕ ಚಲನಚಿತ್ರಗಳು ನಿರ್ಮಾಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅವರ ಕಾದಂಬರಿಗಳನ್ನು ಪುನರ್ ಮುದ್ರಣ ಮಾಡಲಿ’ ಎಂದು ಸಲಹೆ ನೀಡಿದರು. ಸಮಾವೇಶದಲ್ಲಿ 50 ಸ್ತ್ರೀಶಕ್ತಿ ಗುಂಪುಗಳ ಸುಮಾರು 500 ಜನ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.