ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ(ಬಿಬಿಎಂಪಿ) ಎಲ್ಲವೂ ಸರಿಯಾಗಿಲ್ಲ ಎಂಬುದು ದಿನೇ ದಿನೇ ಮನದಟ್ಟಾಗುತ್ತಿದೆ. ಇಲ್ಲಿರುವ ಅಧಿಕಾರಿಗಳು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದಂತಿದೆ. ಇವರಿಗೆಲ್ಲಾ ಕಾನೂನು ಎಂದರೆ ಏನು ಎಂಬುದನ್ನು ಅರ್ಥ ಮಾಡಿಸುವ ಸಮಯ ಹತ್ತಿರ ಬಂದಿದೆ’ ಎಂದು ಹೈಕೋರ್ಟ್ ಗುಡುಗಿದೆ.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ’ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗುವ ಕಸವನ್ನುಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಸುರಿಯದಂತೆ ನ್ಯಾಯಾಲಯದ ಸ್ಪಷ್ಟ ನಿರ್ಬಂಧ ಇದ್ದರೂ ಈ ಆದೇಶವನ್ನು ಉಲ್ಲಂಘಿಸಲಾಗಿದೆ’ ಎಂಬ ಆಕ್ಷೇಪಣೆಗೆ ನ್ಯಾಯಪೀಠ ಗರಂ ಆಯಿತು.ಮುಖ್ಯ ನ್ಯಾಯಮೂರ್ತಿಗಳಂತೂ ಬಿಬಿಎಂಪಿ ಪರ ಹಾಜರಾಗಿದ್ದಹಿರಿಯ ವಕೀಲ ಉದಯ್ ಹೊಳ್ಳಅವರನ್ನು, ‘ನೀವು ಹಿರಿಯ ವಕೀಲರಾಗಿ ಇಂಥ ಆಯುಕ್ತರನ್ನು ಸಮರ್ಥಿಸಿಕೊಳ್ಳುತ್ತಿರುವುದು ವಿಷಾದನೀಯ’ ಎಂದು ವ್ಯಥೆಯನ್ನು ಹೊರಹಾಕಿದರು.
‘ಮುಖ್ಯ ಆಯುಕ್ತರುನ್ಯಾಯಾಲಯದ ಆದೇಶಕ್ಕೆ ಸಂಪೂರ್ಣ ಅಗೌರವ ತೋರಿದ್ದಾರೆ. ಇದಕ್ಕಿಂತ ದೊಡ್ಡ ಅಗೌರವ ಇನ್ನೊಂದಿಲ್ಲ. ಸಂಕಟ ಒದಗಿದೆ ಎಂದು ಸಮರ್ಥಿಸಿಕೊಳ್ಳಲು ಈಗ ನಿಮ್ಮನ್ನು ನಿಯೋಜಿಸಲಾಗಿದೆ. ಇವರನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ. ಹೀಗಾದರೆ ನಾವಾದರೂ ತಾನೆ ಏನು ಹೇಳುವುದು. ನಾವೆಲ್ಲರೂ ನ್ಯಾಯಾಲಯದ ಘನತೆ ಎತ್ತಿ ಹಿಡಿಯಬೇಕಲ್ಲವೇ. ಅಷ್ಟಕ್ಕೂ, ಯಾವುದಾದರೂ ಕಾನೂನಿನ ಮೂಲಕ ಅವರನ್ನು ರಕ್ಷಿಸಬಹುದು ಎಂದು ತೋರಿಸಿದರೆ ನಿಮಗೆ ಸ್ವಾಗತ’ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.