ಬೆಂಗಳೂರು: ಅಕ್ರಮವಾಸಿಗಳ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ನಗರ ಪೊಲೀಸರು, ದಾಖಲೆಗಳಿಲ್ಲದೆ ವಿದೇಶಿಗರಿಗೆ ಮನೆ ಬಾಡಿಗೆ ಕೊಡುವ ಮಾಲೀಕರನ್ನೂ ಬಂಧಿಸುವ ಮೂಲಕ ಆಶ್ರಯದಾತರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಜುಲೈ 21ರಂದು ಕೆ.ಆರ್. ಪುರ ಠಾಣೆ ವ್ಯಾಪ್ತಿಯಲ್ಲಿನ ಹಲವು ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿದ್ದ ವೈಟ್ಫೀಲ್ಡ್ ವಿಭಾಗದ ಪೊಲೀಸರು, ಹಲವು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾ, ಉಗಾಂಡ, ಐವರಿ ಕೋಸ್ಟ್ ಹಾಗೂ ಅಬಿಡ್ಜನ್ (ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್) ರಾಷ್ಟ್ರಗಳ 19 ಪ್ರಜೆಗಳನ್ನು ಬಂಧಿಸಿದ್ದರು.
‘ಪ್ರವಾಸ ಹಾಗೂ ಶೈಕ್ಷಣಿಕ ಉದ್ದೇಶದ ನೆಪದಲ್ಲಿ ನಗರಕ್ಕೆ ಬಂದಿದ್ದ ಬಂಧಿತರು, ವೀಸಾ ಅವಧಿ ಮುಗಿದಿದ್ದರೂ ಹತ್ತು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದರು. ಇವರು ದುಪ್ಪಟ್ಟು ಬಾಡಿಗೆ ನೀಡುತ್ತಿದ್ದರು ಎಂಬ ಕಾರಣಕ್ಕೆ ಮನೆ ಮಾಲೀಕರು ಯಾವುದೇ ದಾಖಲೆ ಪಡೆದುಕೊಂಡಿರಲಿಲ್ಲ. ಹೀಗಾಗಿ, ಅವರ ವಿರುದ್ಧವೂ ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಿದ್ದೇವೆ’ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.
‘ತಮ್ಮ ಕಟ್ಟಡದ ಕೊಠಡಿಗಳನ್ನು ಆರೋಪಿಗಳಿಗೆ ಬಾಡಿಗೆ ಕೊಟ್ಟಿದ್ದ ಬೃಂದಾವನ ಲೇಔಟ್ನ ಅಮೀರ್ (38) ಹಾಗೂ ಪ್ರಿಯಾಂಕನಗರದ ನೀಲಮ್ಮ (35) ಎಂಬುವರನ್ನು ಮಂಗಳವಾರ ಬಂಧಿಸಿದ್ದೇವೆ. ಅಕ್ರಮವಾಸಿಗಳು ಹಾಗೂ ಮನೆ ಮಾಲೀಕರ ವಿರುದ್ಧ ಬುಧವಾರವೂ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಅವರು ಹೇಳಿದರು.
‘ವಿದೇಶಿಯರಿಗೆ ಮನೆ ಕೊಡುವ ಮೊದಲು ಅವರಿಂದ ವೀಸಾ, ಪಾಸ್ಪೋರ್ಟ್, ವಾಸದ ದೃಢೀಕರಣ ಪತ್ರ, ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಪಡೆಯಬೇಕು. ಆ ದಾಖಲೆಗಳನ್ನು ಪೊಲೀಸ್ ಠಾಣೆಗೆ ಹಾಗೂವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್ಆರ್ಒ) ಸಲ್ಲಿಸಿ ಅನುಮತಿ ಪತ್ರ ಪಡೆಯಬೇಕು. ಈ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
*ಬಹುತೇಕ ಆಫ್ರಿಕಾ ಪ್ರಜೆಗಳು ವೇಶ್ಯಾವಾಟಿಕೆ, ಡ್ರಗ್ಸ್ ಮಾರಾಟ ಹಾಗೂ ಸೈಬರ್ ವಂಚನೆಯಲ್ಲಿ ತೊಡಗಿದ್ದಾರೆ. ಹೀಗಾಗಿ, ಮನೆ ಬಾಡಿಗೆ ಕೊಡುವ ಮುನ್ನ ಜನ ಎಚ್ಚರ ವಹಿಸಬೇಕು
–ಕೆ.ಆರ್.ಪುರ ಪೊಲೀಸರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.