ADVERTISEMENT

ಏಳೂವರೆ ಗಂಟೆ ತಡವಾಗಿ ಹೊರಟ ವಿಮಾನ: ಪ್ರಯಾಣಿಕರ ಪರದಾಟ

ಏರ್‌ ಇಂಡಿಯಾದಲ್ಲಿ ಇಂಧನ ಟ್ಯಾಂಕ್ ಸೋರಿಕೆ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 20:00 IST
Last Updated 5 ಜೂನ್ 2019, 20:00 IST
   

ಬೆಂಗಳೂರು:‘ಏರ್ ಇಂಡಿಯಾ' ವಿಮಾನ ಇಲ್ಲಿಂದ ಸಿಂಗಪುರಕ್ಕೆ 7 ಗಂಟೆ 30 ನಿಮಿಷ ತಡವಾಗಿ ಪ್ರಯಾಣ ಬೆಳೆಸಿತು. ಅಷ್ಟೂ ಸಮಯ ವಿಮಾನದಲ್ಲಿ ಕುಳಿತಿದ್ದ ಕೆಲ ಪ್ರಯಾಣಿಕರು ಪರದಾಡಿದರೆ, ಹಲವರು ಪ್ರಯಾಣ ರದ್ದುಪಡಿಸಿ ವಾಪಸ್‌ ಹೋದರು.

ಸಿಂಗಪುರಕ್ಕೆ ಮಧ್ಯಾಹ್ನ 12.20ಕ್ಕೆ ಹೊರಡಬೇಕಿದ್ದ ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಕೂರಿಸಲಾಯಿತು. ‘ಬಳಿಕ ಅರ್ಧ ಗಂಟೆ ತಡವಾಗಲಿದೆ‘ ಎಂದು ಪೈಲಟ್ ಪ್ರಕಟಿಸಿದರು. ವಿಮಾನದ ಇಂಧನ ಟ್ಯಾಂಕ್‌ನಲ್ಲಿ ಸೋರಿಕೆ ಇರುವ ಕಾರಣ ಒಂದು ಗಂಟೆ ತಡವಾಗಬಹುದು ಎಂದು ಮತ್ತೊಮ್ಮೆ ಪ್ರಕಟಣೆ ಹೊರಡಿಸಲಾಯಿತು’ ಎಂದು ಪ್ರಯಾಣಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದುರಸ್ತಿಗೆ ಅಗತ್ಯ ಇರುವ ಪರಿಕರಗಳು ಮುಂಬೈ ಅಥವಾತಿರುವನಂತಪುರದಿಂದ ಬರಬೇಕಿದ್ದು, ವಿಮಾನ ಸುಮಾರು 7 ಗಂಟೆ ತಡವಾಗಿ ಹೊರಡಲಿದೆ. ಆದರೆ, ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಪೈಲಟ್ ಮತ್ತೊಮ್ಮೆ ಹೇಳಿದರು.

ADVERTISEMENT

‘ಎರಡೂವರೆ ವರ್ಷದ ಮಗುವಿನೊಂದಿಗೆ ಸಿಂಗಪುರಕ್ಕೆ ಹೊರಟಿದ್ದೆ. ನಮಗೆ ತಿನ್ನಲು ಸಹ ಏನನ್ನೂ ನೀಡಲಿಲ್ಲ. ಹೀಗಾಗಿ ವಿಮಾನ ಇಳಿದು ಬಂದೆ’ ಎಂದು ಮಹಿಳೆಯೊಬ್ಬರು ಹೇಳಿದರು.

‘1.30ರ ಸುಮಾರಿಗೆ ವಿಮಾನ ಇಳಿದರೂ, ಹೊರಕ್ಕೆ ಬರಲು ಸಂಜೆ 5.30 ದಾಟಿತು. ಅಲ್ಲಲ್ಲೇ ನಮ್ಮನ್ನು ಕೂರಿಸಿ ಸಮಯ ಹಾಳು ಮಾಡಿದರು. ರಾತ್ರಿ ಮನೆಗೆ ವಾಪಸ್ ಬರುವಷ್ಟರಲ್ಲಿ ಗಂಟೆ 7.30 ದಾಟಿತ್ತು’ ಎಂದು ಹೇಳಿದರು.

‘ಮಗಳು ಮತ್ತು ನನ್ನ ಟಿಕೆಟ್‌ಗೆ ಒಟ್ಟು ₹35,000 ಪಾವತಿಸಿದ್ದೇನೆ. 3 ಗಂಟೆ ತಡವಾದರೂ ಪೂರ್ಣ ಪ್ರಮಾಣದ ಹಣ ವಾಪಸ್ ನೀಡಬೇಕೆಂಬ ನಿಯಮ ಇದೆ. ಆದರೂ, ಹಣವಾಪಸ್ ನೀಡಲು ಏರ್‌ಲೈನ್ಸ್ ಅಧಿಕಾರಿಗಳು ನಿರಾಕರಿಸಿದರು. 7 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಲಿದೆ ಎಂಬ ಇ–ಮೇಲ್ ಬಂದಿದೆ’ ಎಂದು ವಿವರಿಸಿದರು.

‘ಸಿಂಗಪುರದಲ್ಲಿ ಉದ್ಯೋಗಿಯಾಗಿರುವ ನಾನು ರಜೆ ಕಳೆಯಲು ಮಗಳೊಂದಿಗೆ ಬಂದಿದ್ದೆ. ವಾಪಸ್ ಹೋಗಲು ಸಾಧ್ಯವಾಗಿಲ್ಲ. ನನ್ನಂತೆ ಹಲವರು ತೊಂದರೆ ಅನುಭವಿಸಿದ್ದಾರೆ’ ಎಂದು ಹೇಳಿದರು.

‘ವಿಮಾನ ಬೆಂಗಳೂರಿನಿಂದ ಸಿಂಗಪುರದತ್ತ ಸಂಜೆ 6.50ಕ್ಕೆ ಹೊರಟಿತು. ಯಾವ ಕಾರಣಕ್ಕೆ ವಿಳಂಬವಾಗಿದೆ ಎಂಬುದು ಗೊತ್ತಿಲ್ಲ’ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.