ADVERTISEMENT

ಕಣ್ಣಾಲಿ ತುಂಬಿಸಿದ ‘ಅಕ್ಕೈ ಕರುಣೆಗೊಂದು ಸವಾಲು’

ಲಿಂಗತ್ವ ಅಲ್ಪಸಂಖ್ಯಾತರ ಉತ್ಸವ ‘ಒಂದೆಡೆ ರಂಗೋತ್ಸವ’ ಆರಂಭ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 14:30 IST
Last Updated 21 ಫೆಬ್ರುವರಿ 2026, 14:30 IST
ನಯನ ಸೂದ್‌  ಅವರು ‘ಅಕ್ಕೈ ಕರುಣೆಗೊಂದು ಸವಾಲು’ ರಂಗಪ್ರದರ್ಶನ ನೀಡಿದರು.
ಪ್ರಜಾವಾಣಿ ಚಿತ್ರ
ನಯನ ಸೂದ್‌  ಅವರು ‘ಅಕ್ಕೈ ಕರುಣೆಗೊಂದು ಸವಾಲು’ ರಂಗಪ್ರದರ್ಶನ ನೀಡಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಗಂಡು ಹೆಣ್ಣಾಗುವುದನ್ನು ಒಪ್ಪದ ಕುಟುಂಬ, ಸಮಾಜ, ನಡುವೆ ಅರಳುವ ಪ್ರೀತಿ- ಪ್ರೇಮಗಳ ಬಂಧನ, ಕಾಮ ಪಿಪಾಸುಗಳ ಕೆಂಗಣ್ಣು, ಮೈಮಾರುವ, ಭಿಕ್ಷೆ ಬೇಡುವ ಕೆಲಸಕ್ಕೆ ಇತಿಶ್ರೀ ಹಾಡಿ ವೈಚಾರಿಕ ಹೋರಾಟದಲ್ಲಿ ಕಟ್ಟಿಕೊಂಡ ಬದುಕು, ರಂಗದ ಮೇಲೆ ತೆರೆದುಕೊಳ್ಳುತ್ತಿದ್ದರೆ ನೋಡುಗರ ಕಣ್ಣಾಲಿ ತುಂಬಿಕೊಳ್ಳುತ್ತಿತ್ತು.

ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್ ಆರ್ಟ್‌ನ (ಎನ್‌ಜಿಎಂಎ) ವೇದಿಕೆಯಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಲಿಂಗತ್ವ ಅಲ್ಪಸಂಖ್ಯಾತರ ಉತ್ಸವ ‘ಒಂದೆಡೆ ರಂಗೋತ್ಸವ’ದಲ್ಲಿ ‘ಅಕ್ಕೈ ಕರುಣೆಗೊಂದು ಸವಾಲು’ ರಂಗ ಪ್ರದರ್ಶನ ಭಾವುಕ ಕ್ಷಣಗಳನ್ನು ಸೃಷ್ಟಿಸಿತು.

ಬಾಡಿಗೆ ಮನೆಯಲ್ಲಿದ್ದವನೊಂದಿಗೆ ಹುಟ್ಟುವ ಪ್ರೀತಿ, ಹೆಣ್ಣಿನಂತೆ ವರ್ತಿಸುವ ಮಗನನ್ನು ಮನೆಯಿಂದಲೇ ಹೊರ ಹಾಕುವ ಅಪ್ಪ, ಸೀರೆ ಉಡುವ ಸಂಭ್ರಮ, ಶೌಚಾಲಯದಲ್ಲಿ ಎರಗುವ ಕಾಮುಕರು, ಸಮುದಾಯದೊಂದಿಗೆ ಸೇರುವ ಕ್ಷಣಗಳು, ಸಮುದಾಯದ ತಾಯಿಯನ್ನು ಸ್ವೀಕರಿಸುವ ಕ್ಷಣಗಳು, ಲಾಲ್‌ಬಾಗ್‌ನಲ್ಲಿ ಮೈಮಾರುತ್ತಲೇ ಮೆರೆದ ದಿನಗಳು, ಮೌಢ್ಯಗಳನ್ನು ವಿರೋಧಿಸುತ್ತ ವೈಚಾರಿಕವಾಗಿ ಬೆಳೆದ ಪರಿ, ಸಂವಿಧಾನದ ದಾರಿಯಲ್ಲಿ ಕಂಡುಕೊಂಡ ಹೋರಾಟಗಳು ರಂಗದಲ್ಲಿ ಅನಾವರಣಗೊಂಡವು.

ADVERTISEMENT

ರಂಗ ಪಯಣ ತಂಡದ ನಯನಾ ಸೂದ್‌ ಅವರು ಬೇಳೂರು ರಘುನಂದನ್‌ ನಿರ್ದೇಶನದಲ್ಲಿ ‘ಅಕ್ಕೈ’ಯನ್ನು ಕಟ್ಟಿಕೊಟ್ಟರು. ರಾಜಗುರು ಹೊಸಕೋಟೆ ತಂಡ ಹಿನ್ನೆಲೆಯಲ್ಲಿ ಸಹಕರಿಸಿತು. 

ವೈಷ್ಣವಿ ನಾಟ್ಯಶಾಲಾ ತಂಡದ ಕಲಾವಿದರ ಭರತನಾಟ್ಯ, ಮಾಳವಿಕ, ಸುಮತಿ, ಅಬೇದ ಬೇಗಂ, ರಕ್ಷಿತಾ ಮಲ್ಲಿಕಾರ್ಜುನ, ದೀಪಾ ಬುದ್ದೆ, ನಿತ್ಯಾನಂದ, ಗೌತಮಿ ಗೌಡ ಅವರ ಕವನ ವಾಚನ, ಸಾಧನಾ ಮಹಿಳಾ ತಂಡದವರು ಪ್ರದರ್ಶಿಸಿದ ‘ಹಸಿವು ಕನಸು’, ಚಂದ್ರಿಕಾ ಅವರ ‘ಕರಗಾಟ’ಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.

‘ಒಂದೆಡೆ ರಂಗೋತ್ಸವ’ದಲ್ಲಿ ಅಕ್ಕೈ ಪದ್ಮಶಾಲಿ ಅವರನ್ನು ಗೌರವಿಸಲಾಯಿತು.

‘ಮನಸ್ಥಿತಿ ಬದಲಾಗಲಿ’ ಇಂಥ ಕಾರ್ಯಕ್ರಮಗಳು

ಬೆಂಗಳೂರಿಗೆ ಸೀಮಿತವಾಗದೇ ರಾಜ್ಯದ ವಿವಿಧೆಡೆ ಮಾತ್ರವಲ್ಲ ದೇಶದ ಅನೇಕ ಕಡೆಗಳಲ್ಲಿ ನಡೆಯಬೇಕು. ಲಿಂಗತ್ವ ಅಲ್ಪಸಂಖ್ಯಾತರ ಬಗೆಗೆ ಸಮಾಜದಲ್ಲಿ ಇರುವ ಮನಸ್ಥಿತಿ ಬದಲಾಗಬೇಕು. ಎಲ್ಲರಿಗೂ ನೆಮ್ಮದಿಯ ಬದುಕು ಕಟ್ಟಿಕೊಡಲು ಸಾಧ್ಯವಿಲ್ಲದಷ್ಟು ದುಃಸ್ಥಿತಿ ನಮ್ಮ ದೇಶದಲ್ಲಿ ಇಲ್ಲ. ಆದರೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಅಭಿಪ್ರಾಯಪಟ್ಟರು.

ಲಿಂಗತ್ವ ಅಲ್ಪಸಂಖ್ಯಾತರ ಸಮಾನ ಅವಕಾಶಗಳ ಸಮಿತಿ ಅಧ್ಯಕ್ಷೆ ನ್ಯಾಯಮೂರ್ತಿ ಆಶಾ ಮೆನನ್‌ ಎನ್‌ಜಿಎಂಎ ನಿರ್ದೇಶಕಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕರ್ನಾಟಕ ವಸತಿ ಮಂಡಳಿ ಆಯುಕ್ತ ಕೆ.ಎ. ದಯಾನಂದ ಭಾರತೀಯ ಸಾಮಾಜಿಕ ಸಂಸ್ಥೆ ನಿರ್ದೇಶಕ ಸೆಲ್ವರಾಜ್‌ ಅರುಳ್‌ನಾಥನ್‌ ಸಂಸ್ಥಾನ ಮಠದ ಗುರೂಜಿ ಗೀತಮ್ಮ ನಾಯಕ ರಂಗ ಕಲಾವಿದ ಮಂಡ್ಯ ರಮೇಶ್‌ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌ ‘ಒಂದೆಡೆ’ ಸಂಸ್ಥಾಪಕಿ ಅಕ್ಯೈ ಪದ್ಮಸಾಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.