ಬೆಂಗಳೂರು: ‘ರಸತತ್ವ ನಮ್ಮ ಎಲ್ಲಾ ಕಲೆಗಳಲ್ಲಿ ಮೂಲ. ಬೊಂಬೆಯಾಟ ಗಳಲ್ಲಿಯೂ ರಸತತ್ವ ಕಾಣಬಹುದು’ ಎಂದು ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಹೇಳಿದರು.
ಭಾನುವಾರ ಇನ್ಫೊಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನವು ‘ಪ್ರಜಾವಾಣಿ’ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ‘ಬೊಂಬೆ ಹಬ್ಬ– ಬೊಂಬೆಯ ಭಾವಾಭಿವ್ಯಕ್ತಿಯಲ್ಲಿ ನವರಸಗಳು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಬೊಂಬೆಯಾಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಸ್ಕೃತ ವಿದ್ವಾಂಸ ವಿ. ರಾಘವನ್ ತಮ್ಮ ಲೇಖನಗಳಲ್ಲಿ ಈ ಬೊಂಬೆಯಾಟದ ಬಗ್ಗೆ ವಿವರಿಸಿದ್ದಾರೆ. ಕಲೆಗಾರನೊಬ್ಬ ಈ ಬೊಂಬೆಗಳಲ್ಲಿ ಭಾವನೆಗಳಿಗೆ ಜೀವ ತುಂಬುತ್ತಾನೆ. ಇದರಲ್ಲಿನ ಪ್ರತಿ ನೃತ್ಯರೂಪಕವು ಮಾನವನ ಜೀವನದ ಭಾಗವಾಗಿರುತ್ತದೆ. ವ್ಯಕ್ತಿಗತವಾದ ಸುಖ–ದುಃಖ ಭಾವವಾದರೆ, ರಸ
ಅವೈಯಕ್ತಿಕವಾದ ಆನಂದ. ಇದು ಪರಿಸರದ ಸಂರಕ್ಷಣೆ ಜೊತೆಗೆ ವ್ಯಕ್ತಿಯನ್ನು ಪರಿಪಕ್ವಗೊಳಿಸಿ ಮನಸಿಗೆ ಸಮಾಧಾನ ಮಾಡುತ್ತದೆ’ ಎಂದರು.
ಇನ್ಫೊಸಿಸ್ ನಿದೇರ್ಶಕಿ ಶೃತಿ ಖುರಾನ ಮಾತಾನಾಡಿ ‘ಬೊಂಬೆಯಾಟ ಎನ್ನುವುದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇದು ವಿಶ್ವದಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದಿದೆ’ ಎಂದರು.
ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ. ರಾಘವನ್ ಅವರು, ‘ಸಂಸ್ಕೃತಿ ಮತ್ತು ತಂತ್ರಜ್ಞಾನದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತೀಯ ವಿದ್ಯಾಭವನ ಸಂಸ್ಕೃತಿಯ ಪ್ರತೀಕವಾಗಿದ್ದರೆ, ಇನ್ಫೋಸಿಸ್ ತಂತ್ರಜ್ಞಾನದ ಪ್ರತೀಕವಾಗಿದೆ. ಬೊಂಬೆ ಹಬ್ಬದ ಸಂಸ್ಕೃತಿ ಉಳಿಸಿ-ಬೆಳೆಸಲು ಇದು ಮೊದಲ ಹೆಜ್ಜೆಯಾಗಿದೆ’ ಎಂದರು.
ಬೊಂಬೆ ಹಬ್ಬದಲ್ಲಿ ’ಧಾತು ಪಪ್ಪೆಟ್ ಥಿಯೇಟರ್’ನ ಅನುಪಮ ಹೊಸಕೆರೆ ನಿರ್ದೇಶಿಸಿದ ಬೊಂಬೆಗಳ ಕಾವ್ಯಾಭಿಕ್ತಿ
ಯನ್ನು ನೃತ್ಯಪಟು ದಿವ್ಯ ಹೊಸಕೆರೆ ಪ್ರಸ್ತುತ ಪಡೆಸಿದರು.
ಸುಚಿತ್ರ ಫಿಲ್ಮ್ ಸೊಸೈಟಿ ನಿರ್ಮಿಸಿರುವ ಬೊಂಬೆಗಳನ್ನು ಕುರಿತು ಸಾಕ್ಷ್ಯಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.